ಸುರಪುರ: ‘ಕನ್ನಡ ಸಾಹಿತ್ಯ ಸಂಘದಲ್ಲಿ ನ.4 ಮತ್ತು 5 ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ ಹೇಳಿದರು.
ಸಂಘದ ರಾಜಾ ಮದನ ಗೋಪಾಲನಾಯಕ ಸ್ಮಾರಕ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನ.4 ರಂದು ಬೆಳಿಗ್ಗೆ 11 ಗಂಟೆಗೆ ಸಾಂಸ್ಕೃತಿಕ ರಾಯಭಾರಿ ಮತ್ತು ಸಂಘದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದ ದಿವಂಗತ ರಾಜಾ ಮದನಗೋಪಾಲ ನಾಯಕ ಅವರ ಪುತ್ಥಳಿಯನ್ನು ಸಂಘದ ಸಭಾ ಭವನದಲ್ಲಿ ಅನಾವರಣಗೊಳಿಸಲಾಗುವುದು’ ಎಂದರು.
‘ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು. ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದನಾಯಕ, ರಾಜಾ ಮದನಗೋಪಾಲನಾಯಕ ಅವರ ಪುತ್ರರಾದ ರಾಜಾ ಹರ್ಷವರ್ಧನ ನಾಯಕ, ರಾಜಾ ವಿಷ್ಣುವರ್ಧನ ನಾಯಕ ಮುಖ್ಯ ಅತಿಥಿಗಳಾಗಿರುವರು’ ಎಂದು ಹೇಳಿದರು.
‘ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಮತ್ತು ಜನಪದ ಹಾಡುಗಾರ್ತಿ ಹನುಮವ್ವ ಭಪ್ಪರಗಿ ಅವರಿಗೆ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ರಂಗನಗೌಡ ಪಾಟೀಲ ಅವರು ಅನುವಾದಿಸಿದ ಶ್ರೀವಾಸ್ತವ ಅವರು ರಚಿಸಿದ ‘1957-58ರ ಬ್ರಿಟಿಷ್ ಭಾರತ ಹೋರಾಟದ ದೇಶಭಕ್ತರು ಹಾಗೂ ದೇಶದ್ರೋಹಿಗಳು’ ಪುಸ್ತಕವನ್ನು ನಿವೃತ್ತ ಎಸ್.ಪಿ.ಚಂದ್ರಕಾಂತ ಭಂಡಾರಿ ಬಿಡುಗಡೆಗೊಳಿಸುವರು. ಸಾಹಿತಿ ಸಂಗಮೇಶ ಬಾದವಾಡಗಿ ಪುಸ್ತಕ ಕುರಿತು ಮಾತನಾಡುವರು’ ಎಂದು ತಿಳಿಸಿದರು.
‘ಸಂಜೆ 5 ಗಂಟೆಯಿಂದ ಸ್ಪಂದನ ಮೆಲೋಡಿಸ್ ಅವರಿಂದ ರಸ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
‘ನ.5 ರಂದು ಬೆಳಿಗ್ಗೆ 11 ಗಂಟೆಗೆ ಸಾಹಿತಿ ನಬಿಲಾಲ ಮಕಾನದಾರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಾಹಿತಿ ಚಿದಾನಂದ ಸಾಲಿ ಉದ್ಘಾಟಿಸುವರು. ಸಾಹಿತಿಗಳಾದ ಅಬ್ದುಲರಬ್ ಉಸ್ತಾದ, ಕುಪೇಂದ್ರ ವಠಾರ ಮುಖ್ಯ ಅತಿಥಿಗಳಾಗಿರುವರು. 32 ಕವಿಗಳು ಕವನ ವಾಚಿಸುವರು’ ಎಂದು ಹೇಳಿದರು.
‘ಮಧ್ಯಾಹ್ನ 2 ಗಂಟೆಗೆ ಏರ್ಪಡಿಸಿರುವ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಗಾಯಕ ಹುಸೇನಸಾಬ ದಾಸ ಉದ್ಘಾಟಿಸುವರು. ಗಾಯಕಿ ನಿರ್ಮಲಾ ರಾಜಗುರು ಅಧ್ಯಕ್ಷತೆ ವಹಿಸುವರು. ಸುನಂದಾ ಸಾಲವಾಡಗಿ, ರೀಟಾ ಹಂಚಾಟೆ ಅವರಿಂದ ಗಾಯನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಉಪಾಧ್ಯಕ್ಷೆ ಜಯಲಲಿತಾ ಪಾಟೀಲ, ಕಾರ್ಯದರ್ಶಿ ರಾಜಶೇಖರ ದೇಸಾಯಿ, ಖಜಾಂಚಿ ಪ್ರಕಾಶಚಂದ ಜೈನ್ ಇದ್ದರು.