ಶಹಾಪುರ: ತಾಲ್ಲೂಕಿನಲ್ಲಿ ಗ್ರಾಮ ವೊಂದರ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಲಾಗಿದೆ ಎಂದು ವರ್ಷದ ನಂತರ ಪ್ರಕರಣ ದಾಖಲಾಗಿದೆ.
‘ತಾಲ್ಲೂಕಿನ ಗ್ರಾಮವೊಂದರ ಸುನಿಲ ರಂಗಪ್ಪ ಮಲ್ಹಾರ (22) ಆರೋಪಿ. ಶಹಾಪುರದ ಶರಣಬಸವ ಮತ್ತು ಇನ್ನೊಂದು ಗ್ರಾಮದ ದೌಲಪ್ಪ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ. ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
‘ಶುಕ್ರವಾರ ದೂರವಾಣಿ ಕರೆ ಬಂದಿದ್ದು, ಬಾಲಕಿ ಮೇಲೆ ಅತ್ಯಾಚಾರವಾಗಿದೆ. ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಕೋರಲಾಗಿತ್ತು. ಶಹಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಚೆನ್ನಯ್ಯ ಹಿರೇಮಠ ಅವರು ಬಾಲಕಿಯನ್ನು ಭೇಟಿಯಾಗಿ, ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದರು’ ಎಂದು ಅವರು ತಿಳಿಸಿದ್ದಾರೆ.
‘ಮೂವರು ಆರೋಪಿಗಳು 2020ರ ಜುಲೈನಲ್ಲಿ ಬಾಲಕಿಯನ್ನು ಆಟೊದಲ್ಲಿ ಅಪಹರಿಸಿದ್ದರು. ನಿರ್ಜನ ಪ್ರದೇಶದಲ್ಲಿ ಸುನಿಲ ಕೃತ್ಯವಸೆಗಿದರೆ, ಇನ್ನಿಬ್ಬರು ಆರೋಪಿಗಳು ಕುಮ್ಮಕ್ಕು ನೀಡಿದ್ದರು. ಸ್ಥಳಕ್ಕೆ ಶನಿವಾರ ಆರೋಪಿಗಳನ್ನು ಕರೆದೊಯ್ದು ಮಹಜರು ಮಾಡಲಾಯಿತು’ ಎಂದು ಅವರು ತಿಳಿಸಿದ್ದಾರೆ.