ಹುಣಸಗಿ: ತಾಲ್ಲೂಕಿನಲ್ಲಿ ನಿರ್ಮಿತಿ ಕೇಂದ್ರದ ಕಾಮಗಾರಿಗಳು ನಿಧಾನ ಗತಿಯಲ್ಲಿ ನಡೆಯುತ್ತಿದ್ದು, ಹಲವು ವರ್ಷಗಳಿಂದ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಜಯ ಕರ್ನಾಕಟ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಮಾಲಿಪಾಟೀಲ ಆರೋಪಿಸಿದರು.
ಜಯ ಕರ್ನಾಕಟ ಸಂಘಟನೆವತಿಯಿಂದ ಈಚೆಗೆ ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸುರಪುರ ಹಾಗೂ ಹುಣಸಗಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಎಜೆನ್ಸಿ ಹೆಸರಿನಲ್ಲಿ ಕಾಮಗಾರಿಗಳು ನಡೆದಿವೆ. ಆದರೆ ಒಂದು ಕಡೆ ಪೂರ್ಣಗೊಂಡಿಲ್ಲ ಎಂದು ಕಿಡಿಕಾರಿದರು.
ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ವೈದ್ಯಾಧಿಕಾರಿಗಳ ವಸತಿ ಗೃಹ, ಅಂಗನವಾಡಿ ಕೇಂದ್ರ, ಜುಮಾಲಪುರ ಗ್ರಾಮದಲ್ಲಿ ಎಎನ್ಎಂ.ಸಿ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಗುಡುಗಿದರು.
ಸುರಪುರ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿನಾಯಕ ಮಾತನಾಡಿ, ಇಲ್ಲಿ ನಡೆದಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ. ಗುಣಮಟ್ಟದ ಮರಳು ಬಳಸುತ್ತಿಲ್ಲ. ತುಕ್ಕು ಹಿಡಿದ ಕಬ್ಬಿಣ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.ಹುಣಸಗಿ ತಹಶಿಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವೆಂಕಟೇಶರಡ್ಡಿ ಯಾದಗಿರಿ, ಸೋಪಣ್ಣ ಶಹಾಪುರ, ಶರಣಪ್ಪ ಸುರಪುರ, ಮಲ್ಲು ಕಬಡಗೇರಾ, ಶಶಿಧರ ಪತ್ತಾರ, ಬಸವರಾಜ ಮಾಲಿ ಪಾಟೀಲ, ನಿಂಗಣ್ಣ ಪಾಟೀಲ, ಸಂಗಮೇಶ ಉಪ್ಪಲದಿನ್ನಿ, ಗದ್ದೆಪ್ಪ ಹವಾಲ್ದಾರ್, ಶಂಕರಗೌಡ ಸೇರಿದಂತೆ ಇತರರು ಇದ್ದರು.