ಯಾದಗಿರಿ: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಈ ಪೈಕಿ ಕೆಲ ತಾಲ್ಲೂಕುಗಳಲ್ಲಿ ಗೋದಾಮುನಿಂದಲೇ ಅಕ್ಕಿ, ಎಣ್ಣೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಶಹಾಪುರ, ಸುರಪುರದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಸರ್ಕಾರ ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಪಡಿತರ ಅಕ್ಕಿ ನೀಡುತ್ತಿದೆ. ಆದರೆ, ಜಿಲ್ಲೆಯ ಅಲ್ಲಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜಿಲ್ಲೆಯಲ್ಲಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟವಾಗುತ್ತಿದೆ ಎನ್ನುವ ಸಂಶಯವೂ ವ್ಯಕ್ತವಾಗಿದೆ.
ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನಿಂದ ಪಡಿತರ ಅಕ್ಕಿ ಸಂಗ್ರಹಿಸಿಕೊಂಡು ರಾಜಸ್ಥಾನ, ಗುಜರಾತ್ಗೆ ಸಾಗಿಸುತ್ತಿರುವ ಆರೋಪಗಳಿವೆ. ‘ಅನೇಕ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಂದ ಪಡಿತರ ಅಕ್ಕಿಯನ್ನು ಗ್ರಾಮದ ಕೆಲ ದಲ್ಲಾಳಿಗಳು ರಾತ್ರಿ ಸಮಯದಲ್ಲಿ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ನಂತರ ಗೋಪ್ಯವಾಗಿ ಸಂಗ್ರಹಿಸಿ ಅದನ್ನು ಪಾಲಿಷ್ ಮಾಡಿ ಬ್ರ್ಯಾಂಡ್ ಇರುವ ಚೀಲದಲ್ಲಿ ಹಾಕಿ ಬೇರೆಡೆ ಸಾಗಿಸುತ್ತಾರೆ. ಪಡಿತರ ಅಕ್ಕಿಯನ್ನು ಮಾರಾಟ ಮಾಡುವ ವ್ಯಕ್ತಿಗಳು ಸಿಕ್ಕರೆ ಅಂಥವರ ರೇಷನ್ ಕಾರ್ಡ್ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹ.
‘ಪಡಿತರ ಅಕ್ಕಿ, ಅಕ್ಷರ ದಾಸೋಹದ ಧಾನ್ಯಗಳಿಗೆ ಸಂಬಂಧಿಸಿದಂತೆ ಕಳವು ಪ್ರಕರಣಗಳು ಹೆಚ್ಚಾಗಿದ್ದರೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಇವುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಕಳವು ಪ್ರಕರಣಗಳಿಗೆ ಯಾರು ಹೊಣೆ?. ಉಗ್ರಾಣದ ವ್ಯವಸ್ಥಾಪಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು’ ಎಂದು ಬಿಜೆಪಿ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಅಭಿಪ್ರಾಯಪಡುತ್ತಾರೆ.
ಆಹಾರ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿರಸ್ತೇದಾರ್ ನಿರೀಕ್ಷಕರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ಕ್ರಮವನ್ನು ಆ ಇಲಾಖೆಯ ಆಯುಕ್ತರು ಕೈಗೊಳ್ಳಲಿದ್ದಾರೆ. ಅಕ್ಷರ ದಾಸೋಹ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಅವರಿಗೆ ಸೂಚಿಸುತ್ತೇನೆಸುಶೀಲಾ ಬಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.