ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮಾನತುಗೊಂಡ ಸಿಬ್ಬಂದಿ ರಕ್ಷಣೆಗೆ ಯತ್ನ

ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್ ಹಣ ದುರ್ಬಳಕೆ ಪ್ರಕರಣ: ಸಮಗ್ರ ತನಿಖೆಗೆ ಷೇರುದಾರರ ಆಗ್ರಹ
Last Updated 8 ಮೇ 2022, 3:19 IST
ಅಕ್ಷರ ಗಾತ್ರ

ಶಹಾಪುರ: ನಗರದ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕ್ 1997-98ನೇ ಸಾಲಿನಲ್ಲಿ ನೋಂದಣಿಯಾಗಿದೆ.

ಬ್ಯಾಂಕ್‌ಗೆ ಭಾರತೀಯ ರಿಸರ್ವ ಬ್ಯಾಂಕ್‌ನಿಂದ ಲೈಸನ್ಸ್ ಇದೆ. ಆದರೆ, ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಂಚನೆ ಹಾಗೂ ಮೋಸ ಮಾಡಿರುವುದನ್ನು ದಾಖಲೆಗಳ ಸಮೇತ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ವರದಿ ಸಲ್ಲಿಸಿದ್ದಾರೆ. ಆದರೆ, ಅಮಾನತು ಆದ ಸಿಬ್ಬಂದಿಗೆ ಬ್ಯಾಂಕ್‌ನ ರಕ್ಷಾಕವಚ
ನೀಡಿರುವುದಕ್ಕೆ ಷೇರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಬ್ಯಾಂಕ್‌ನ ಅಂದಿನ ವ್ಯವಸ್ಥಾಪಕ ಚನ್ನಬಸಪ್ಪ ಬೆನಕಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ 7 ತಿಂಗಳು ಗತಿಸಿವೆ. ಆದರೂಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿಲ್ಲ. ಅವರನ್ನು ಅಮಾನತಿನಲ್ಲೇ ಮುಂದುವರೆಸಲಾಗಿದೆ. ಅಮಾನತು ಗೊಂಡ ನೌಕರ ಗುರುಲಿಂಗಪ್ಪ ಪಾಟೀಲ ಪ್ರತಿ ದಿನ ಬ್ಯಾಂಕ್‌ಗೆ ಹಾಜರಾಗುವುದು ಮತ್ತು ಪ್ರತ್ಯೇಕ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವುದು ವರದಿಯಿಂದ ಗೊತ್ತಾಗಿದೆ.

‘ಇರ್ಫಾನ್ ಅಟೋ ಗ್ಯಾರೇಜ್ ಹೆಸರಿನ ಚಾಲ್ತಿ ಖಾತೆ ಯಾವುದೇ ಕೆವೈಸಿ ದಾಖಲಾತಿಗಳು ಪಡೆಯದೇ ವಿವಿಧ ವ್ಯಕ್ತಿಗಳು ಸದರಿ ಖಾತೆಯಲ್ಲಿ ವ್ಯವಹಾರ ಮಾಡಿರುವುದು, ರಸೀದಿಗಳ ಬೇರೆ ಬೇರೆ ರುಜುಗಳ ದಾಖಲೆಗಳಿಂದ ದೃಢಪಡುತ್ತದೆ. ಈ ವ್ಯವಹಾರಕ್ಕೆ ಅಧ್ಯಕ್ಷರು ಮತ್ತು ಲೆಕ್ಕಿಗ ಗುರುಲಿಂಗಪ್ಪ ಪಾಟೀಲ ಅವರು ಜಂಟಿಯಾಗಿ ಅವ್ಯವಹಾರ ಮಾಡಿರುವುದು’ ವರದಿಯಲ್ಲಿ ಉಲ್ಲೇಖವಿದೆ.

ಸಹಕಾರ ಇಲಾಖೆಯ ಅಧಿಕಾರಿಗಳು ಬ್ಯಾಂಕ್‌ಗೆ ಅನಿರೀಕ್ಷಿತ ಭೇಟಿ ನೀಡಿದ ಸಂದರ್ಭದಲ್ಲಿ ಹಲವಾರು ಅವ್ಯವಹಾರ ಅಂಶಗಳು ಬೆಳಕಿಗೆ ಬಂದವು. ಇದರ ಹಿನ್ನೆಲೆಯಲ್ಲಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ಆರೋಪಿಗಳಿಂದ ವಸೂಲಾತಿ ಮಾಡಲು ಪಂಚಾಯಿತ್ ದಾವೆ ದಾಖಲು ಮಾಡಲು ಮತ್ತು ಶಿಸ್ತು ಪ್ರಾಧಿಕಾರದ ವಿಚಾರಣಾಧಿಕಾರಿ ನೇಮಕಾತಿ ಮಾಡಿ ವಿಚಾರಣೆ ಮಾಡುವ ಎಲ್ಲಾ ವ್ಯವಹಾರಗಳು ಸೃಷ್ಟಿ ಮಾಡಲಾದ ವ್ಯವಹಾರಗಳೆಂದು ತಿಳಿಸಲಾಗಿದೆ. ನಾಲ್ಕು ಜನ ಸಿಬ್ಬಂದಿಗಳ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಿ ಪಟ್ಟಣ ಬ್ಯಾಂಕ್‌ಗಳ ಮಹಾ ಮಂಡಳ ಹುಬ್ಬಳ್ಳಿ ಇವರ ನ್ಯಾಯಾಲಯದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರವಾಗಿ ಕಲಂ 69ರ ಪ್ರಕರಣ ದಾಖಲು ಮಾಡಲು ವರದಿಯಲ್ಲಿ ಸೂಚಿಸಿದೆ.

‘ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರು ಹಣ ದುರ್ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ಯಾಂಕ್‌ನ ನಿರ್ದೇಶಕರು ತಮ್ಮ ಸಮೀಪದ ಕುಟುಂಬ ವರ್ಗದ ಸದಸ್ಯರಿಗೆ ಬೇನಾಮಿ ಹೆಸರಿನಲ್ಲಿ ಸಾಲ ನೀಡಿ ಅಕ್ರಮ ಎಸಗಿದ ಬಗ್ಗೆ ಸಹ ಜಿಲ್ಲಾ ಸಹಕಾರ ಉಪನಿಬಂಧಕರು ಪತ್ತೆ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ
ಮನವಿ ಮಾಡಿದ್ದಾರೆ.

ಎಫ್.ಡಿ. ಹಣ ವಾಪಸ್ ನೀಡದ ಬ್ಯಾಂಕ್ ಸಿಬ್ಬಂದಿ: ಆರೋಪ

ಶಹಾಪುರ: ತಾಲ್ಲೂಕಿನ ದರಿಯಾಪುರ ಗ್ರಾಮದ ಅಂಗವಿಕಲ ಭೀಮಣ್ಣ ಪಾಟೀಲ ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಭದ್ರತಾ ಠೇವಣಿ (ಎಫ್‌ಡಿ) ₹5 ಲಕ್ಷ ಹಣವನ್ನು ಮಕ್ಕಳ ಹೆಸರಿನಲ್ಲಿ ಇರಿಸಿದ್ದರು. ಅವಧಿ ಮುಗಿದರೂ ಎಫ್‌ಡಿ ಹಣ ನೀಡುತ್ತಿಲ್ಲ ಎಂದು ಭೀಮಣ್ಣ ಪಾಟೀಲ ಆರೋಪಿಸಿದ್ದಾರೆ.

‘ಈಗಾಗಲೇ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ನಾಲ್ಕು ತಿಂಗಳು ಕಳೆದರೂ ಎಫ್‌ಡಿ ಹಣ ನೀಡದೆ ಸತಾಯಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT