ಶಹಾಪುರ: ತಾಲ್ಲೂಕಿನ ವಿವಿಧ ಕಡೆ ಕಳವು ಮಾಡಿದ ಮೂವರು ಆರೋಪಿಗಳಿಂದ ₹8 ಲಕ್ಷ ಮೌಲ್ಯದ 13 ಬೈಕ್ಗಳನ್ನು ಹಾಗೂ ದೇವಸ್ಥಾನದ ಹುಂಡಿ ಕಳವು ಮಾಡಿದ್ದ ₹15 ಸಾವಿರ ನಗದು ಶನಿವಾರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ರಸ್ತಾಪುರ ಗ್ರಾಮದ ಸಂತೋಷ ಅರಿಕೇರಿ, ಖಂಡಪ್ಪ ನಾಯ್ಕೋಡಿ ಹಾಗೂ ಮದ್ರಿಕಿ ಗ್ರಾಮದ ದೇವರಾಜ ಅಗಸರ ಬಂಧಿತರು.
ಜಿಲ್ಲಾ ಎಸ್ಪಿ ಜಿ.ಸಂಗೀತಾ ಹಾಗೂ ಜಾವಿದ ಇನಾಮದಾರ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ನಗರದ ವಾಲ್ಮೀಕಿ ಚೌಕ್ ಹತ್ತಿರ ಮೂವರು ವ್ಯಕ್ತಿಗಳು ಸಂಶಯಾಸ್ಪವಾಗಿ ತಿರುಗಾಡುತ್ತಿದ್ದಾಗ ಠಾಣೆಗೆ ತಂದು ವಿಚಾರಣೆ ಮಾಡಿದಾಗ ಶಹಾಪುರ, ಜೇವರ್ಗಿ, ವಡಗೇರಾ, ಸೈದಾಪುರ ಮುಂತಾದ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿಕೊಂಡ ಬಗ್ಗೆ ಬಹಿರಂಗವಾಗಿದೆ.
ತಾಲ್ಲೂಕಿನ ಬಸವಂತಪುರ ಗ್ರಾಮದ ದೇವಸ್ಥಾನದ ಹುಂಡಿ ಕಳ್ಳತನ ಮಾಡಿ ₹15 ಸಾವಿರ ಹಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಶಹಾಪುರ ಠಾಣೆಯ ಪಿ.ಐ. ಎಸ್.ಎಂ. ಪಾಟೀಲ ತಿಳಿಸಿದರು.
ಠಾಣೆಯ ಪಿಎಸ್ಐ ಶಾಮಸುಂದರ ನಾಯಕ ಹಾಗೂ ಪೊಲೀಸ್ ಸಿಬ್ಬಂದಿ ಲಕ್ಕಪ್ಪ, ಶಿವಲಿಂಗ ರಾಮಚಂದ್ರ, ಧರ್ಮರಾಜ, ಜುಬೇರ ಪಟೇಲ್, ಮುತ್ತಪ್ಪ ಸಿದ್ರಾಮಯ್ಯ, ಮಹಾದೇವಪ್ಪ ತಂಡದಲ್ಲಿ ಇದ್ದರು.