ಕೆಂಭಾವಿ: ಪಟ್ಟಣದ ಕೋರಿ ಸಿದ್ದೇಶ್ವರ ಪುಣ್ಯಾಶ್ರಮದ ಎದುರು ಹಾದು ಹೋಗಿರುವ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಒಳಪಡುವ ಉಪ ಕಾಲುವೆ ಒಡೆದು ರೈತರ ಹೊಲಗದ್ದೆಗಳಿಗೆ ನೀರು ನುಗ್ಗಿದ ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಮಾಲಗತ್ತಿ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಡಿ-1 ಸಂಖ್ಯೆಯ ಈ ಉಪ ಕಾಲುವೆಯ ದುರಸ್ತಿಗೆ ಹಲವು ಬಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಜಮೀನು ಮಾಲೀಕ ಪ್ರಧಾನೆಪ್ಪ ಪೂಜಾರಿ.
ಇದೇ ಉಪ ಕಾಲುವೆ ಅಚ್ಚುಕಟ್ಟು ರಸ್ತೆಯ ಮೂಲಕ ಕೋರಿಸಿದ್ದೇಶ್ವರ ಪುಣ್ಯಾಶ್ರಮಕ್ಕೆ ತೆರಳಬೇಕಾಗಿದ್ದು, ಕಾಲುವೆ ಒಡೆದಿರುವುದರಿಂದ ಮಠಕ್ಕೆ ತೆರಳುವುದು ಕಷ್ಟಸಾಧ್ಯವಾಗಿದೆ. ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇಲ್ಲಿಯವರೆಗೆ ಸ್ಥಳಕ್ಕೆ ಆಗಮಿಸಿಲ್ಲ.
ಈ ಕುರಿತು ರೈತರು ತಮ್ಮ ಆಕ್ರೋಶ ಹೊರಹಾಕಿದ್ದು ಒಡೆದ ಕಾಲುವೆ ದುರಸ್ತಿಗೆ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮಾಲಗತ್ತಿ ಉಪ ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.