ಯರಗೋಳ: ಸುಮಾರು ತಿಂಗಳುಗಳ ನಂತರ ಹೊಸ ವರ್ಷದ ಮೊದಲ ದಿನಕ್ಕೆ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಶಾಲೆ–ಕಾಲೇಜಿಗೆ ಹೋಗಲು ಉತ್ಸುಕರಾಗಿದ್ದಾರೆ.
ಅಲ್ಲಿಪುರ, ಹತ್ತಿಕುಣಿ, ಅರಿಕೇರಾ, ಬಂದಳ್ಳಿ, ಯರಗೋಳ, ಹೊನಗೇರಾ, ಅರಿಕೇರಾ ಬಿ., ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆ, ಕಾಲೇಜುಗಳ ಕೋಣೆ, ಶೌಚಾಲಯಗಳು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿಸಿದ್ದಾರೆ.
‘ಯರಗೋಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿಗಳು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಬರುವಾಗ ಕಡ್ಡಾಯವಾಗಿ ಪಾಲಕರ ಅನುಮತಿ ಪತ್ರ, ನೀರಿನ ಬಾಟಲ್, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ’ ಎಂದು ಉಪನ್ಯಾಸಕ ಸ್ಯಾಮ್ಯುಯೆಲ್ ಕನ್ನಡಿ ಹೇಳಿದರು.
‘ಪಂಚಾಯಿತಿ ಸಿಬ್ಬಂದಿ ಕೋಣೆಗಳಿಗೆ ಸ್ಯಾನಿಟೈಜರ್ ಮಾಡಿದ್ದು, ಥರ್ಮಲ್ ಸ್ಕ್ಯಾನಿಂಗ್ ಮಾಡಲಾತ್ತದೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಕೋಣೆಗಳಲ್ಲಿ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ’ ಎಂದು ಅಲ್ಲಿಪುರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಿದ್ಯಾ ಸಜ್ಜನಶೆಟ್ಟರ್ ತಿಳಿಸಿದರು.
‘ಉಳಿದ ಅನುದಾನದಲ್ಲಿ ಶಾಲೆ, ಕಾಲೇಜುಗಳ ಕೋಣೆ, ಶೌಚಾಲಯಗಳು ಸ್ಯಾನಿಟೇಜರ್ ಮಾಡಲಾಗಿದೆ’ ಎಂದು ಹತ್ತಿಕುಣಿ ಮತ್ತು ಬಂದಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಶಾಹಬಾದಿ ಮಾಹಿತಿ ನೀಡಿದರು.
‘ಕಾಲೇಜಿಗೆ ತೆರಳಲು ಉತ್ಸುಕನಾಗಿದ್ದು, ಈ ಬಗ್ಗೆ ಮನೆಯಲ್ಲಿ ಪಾಲಕರ ಒಪ್ಪಿಗೆ ಪಡೆದಿರುವೆ. ಕಾಲೇಜಿನಲ್ಲಿ ಅಂತರ ಕಾಯ್ದುಕೊಂಡು ಸ್ನೇಹಿತರೊಂದಿಗೆ ಕುಳಿತುಕೊಳ್ಳುವೆ’ ಎಂದು ಯರಗೋಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಈಶ್ವರ ಸಂತಸ ವ್ಯಕ್ತಪಡಿಸಿದರು.