ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಸಿಡಿಲಿಗೆ ಎರಡು ಜಾನುವಾರು ಬಲಿ

ಅಕಾಲಿಕ ಮಳೆಗೆ ತಾಲ್ಲೂಕಿನಲ್ಲಿ ಅಪಾರ ಬೆಳೆ ನಾಶ
Last Updated 24 ನವೆಂಬರ್ 2021, 16:19 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನಲ್ಲಿ ಕಳೆದೆರಡು ದಿನ ಮತ್ತು ಮಂಗಳವಾರ ತಡರಾತ್ರಿ ಸುರಿದ ಅಕಾಲಿಕ ಮಳೆಗೆ ಸುರಪುರ, ಕೆಂಭಾವಿ ಮತ್ತು ಕಕ್ಕೇರಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. 1,500 ಎಕರೆಗೂ ಅಧಿಕ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನ ಹೆಮನೂರ, ಕುಪಗಲ್ ಹೆಮ್ಮಡಗಿ, ಕರ್ನಾಳ, ಸೂಗೂರು, ದೇವಾಪುರ, ಶಾಂತಪುರ, ನಾಗರಾಳ, ಆಲ್ದಾಳ, ಶೆಳ್ಳಗಿ, ಮುಷ್ಠಳ್ಳಿ, ಕಕ್ಕೇರಾ ಸೇರಿದಂತೆ ಇತರೆ ಗ್ರಾಮಗಳಲ್ಲಿ ರಾಶಿ ಮಾಡಿ ಹಾಕಿದ್ದ ಭತ್ತ ಮಳೆ ನೀರಿನಿಂದ ಹಾಳಾಗಿದೆ. ಇನ್ನೂ ಕೆಲ ಕಡೆ ಕೊಯಿಲು ಹಂತದಲ್ಲಿದ್ದ ಭತ್ತ ಸಂಪೂರ್ಣವಾಗಿ ನೆಲಕ್ಕೆ ಮಲಗಿದೆ.

‘ಸುರಪುರ ಹೋಬಳಿಯ ಅರೆಕೇರಾ 1, ದೇವಿಕೇರಾ 2, ವಾಗಣಗೇರಾ 1, ವಾರಿಸಿದ್ದಾಪುರ-1 ದೇವರಗೋನಾಲ 1, ಬಿಜಾಸ್ಪುರ-1, ಕೆಂಭಾವಿ ಹೋಬಳಿಯ ಯಾಳಗಿ 8, ನಗನೂರು -3 ಒಟ್ಟು ತಾಲ್ಲೂಕಿನಲ್ಲಿ 18 ಮನೆಗಳು ಕುಸಿದಿವೆ. ಬೇವಿನಾಳ ಎಸ್.ಕೆ., ಶೆಳ್ಳಗಿ ಗ್ರಾಮದಲ್ಲಿ ತಲಾ ಒಂದೊಂದು ಎತ್ತು ಸಿಡಿಲಿಗೆ ಬಲಿಯಾಗಿವೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು.

‘ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಭತ್ತ ನಾಶವಾಗಿದೆ. ಬಹುತೇಕ ಕಡೆ ಹೊಲಗಳಲ್ಲಿ ನೀರು ನಿಂತ್ತಿದ್ದು ಹತ್ತಿ ಮತ್ತು ಮೆಣಸಿನಕಾಯಿ ಹಾಗೂ ಇತರೆ ಬೆಳೆಗಳು ಹಾಳಾಗಿವೆ. ಕಂದಾಯ ಅಧಿಕಾರಿ ಮತ್ತು ಕೃಷಿ ಅಧಿಕಾರಿಗಳಿಗೆ ಹಾನಿಯನ್ನು ಸರ್ವೆ ಮಾಡಿ ವರದಿ ಒಪ್ಪಿಸಲು ಸೂಚಿಸಿದ್ದೇನೆ’ ಎಂದರು.

‘ಇವತ್ತಿನವರೆಗೆ ಲಭ್ಯವಾಗಿರುವ ಮಾಹಿತಿ ಅಂತಿಮವಲ್ಲ. ಇನ್ನಷ್ಟು ಹೆಚ್ಚಾಗಬಹುದು. ಸರ್ವೆ ಸಂಪೂರ್ಣ ಮುಗಿದ ನಂತರ ಸಮಗ್ರ ಮಾಹಿತಿ ಸಿಗಲಿದೆ. ವರದಿ ಜಿಲ್ಲಾಧಿಕಾರಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಪರಿಹಾರ ಮಂಜೂರಾದಲ್ಲಿ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಲಾಗುವುದು’ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಗುರುನಾಥ, ಕೃಷಿ ಅಧಿಕಾರಿ ಡಾ. ಭೀಮರಾಯ ಹವಾಲ್ದಾರ, ಕಂದಾಯ ಅಧಿಕಾರಿಗಳಾದ ಗುರುಬಸಪ್ಪ ಪಾಟೀಲ, ವಿಠ್ಠಲ ಬಂದಾಳ, ಗ್ರಾಮ ಲೆಕ್ಕಿಗರಾದ ಪ್ರದೀಪ್ ಕುಮಾರ, ಶಿವುಕುಮಾರ, ದುಷ್ಯಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT