ವಡಗೇರಾ: ವಡಗೇರಾ ತಾಲ್ಲೂಕು ಘೋಷಣೆಯಾಗಿ 5 ವರ್ಷ ಕಳೆದರೂ ಒಂದು ಇಲಾಖೆ ಕಾರ್ಯ ಆರಂಭಿಸದೆ ಜನರಿಗೆ ಈ ಹೊಸ ತಾಲ್ಲೂಕು ಉಪಯೋಗಕ್ಕೆ ಬಾರದಂತಾಗಿದೆ.
ಪ್ರತಿಯೊಂದು ಕಾರ್ಯಕ್ಕೂ ಸಾರ್ವಜನಿಕರು ಹಳೆಯ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಗುರುಮಠಕಲ್, ಹುಣಸಗಿ, ವಡಗೇರಾ ಪಟ್ಟಣಗಳನ್ನು ಒಂದೇ ಸಮಯದಲ್ಲಿ ತಾಲ್ಲೂಕು ಕೇಂದ್ರಗಳಾಗಿ ಘೋಷಣೆ ಮಾಡಲಾಗಿದೆ. ಗುರುಮಠಕಲ್ ಮತ್ತು ಹುಣಸಗಿಯ ತಾಲ್ಲೂಕು ಕೇಂದ್ರದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ಮತ್ತು ಎಲ್ಲಾ ಇಲಾಖೆಗಳು ಆರಂಭವಾಗಿವೆ. ಆದರೆ ವಡಗೇರಾದಲ್ಲಿ ಮಾತ್ರ ಇನ್ನೂ ಗ್ರಾಮ ಪಂಚಾಯಿತಿ ಆಡಳಿತ ಇದೆ.
ಹೊಸ ತಾಲ್ಲೂಕು ಕೇಂದ್ರದಲ್ಲಿ ಯಾವುದೇ ಸೇವೆ ಸಿಗದಿರುವುದರಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಹಳೆಯ ತಾಲ್ಲೂಕು ಶಹಾಪುರಕ್ಕೆಅಲೆಯಬೇಕು. ಉಪನೋಂದಣಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಸೇವೆಗಾಗಿ ಇನ್ನೂ ಹಳೆಯ ಕೇಂದ್ರವನ್ನೆ ಅವಲಂಬಿಸಿದ್ದಾರೆ.
ಕೃಷ್ಣ ಎಡದಂಡೆ ಕಾಲುವೆ ನೀರು ಈ ತಾಲ್ಲೂಕಿನ ಕೊನೆಯ ಭಾಗದ ಜನರಿಗೆ ಸಿಗುತ್ತಿಲ್ಲ. ಈ ಭಾಗ ಹೆಸರಿಗಷ್ಟೆ ನೀರಾವರಿ ಪ್ರದೇಶ. ಆದರೆ ಇಲ್ಲಿ ರೈತರು ಸರಿಯಾದ ಕಾಲುವೆಗಳು ಇಲ್ಲದೆ ತೊಂದರೆ ಅನುಭವಿಸುತಿದ್ದಾರೆ. ನೀರಾವರಿ ಸಚಿವರು ಈ ಸಮಸ್ಯೆಗಳನ್ನು ಗಮನಿಸಬೇಕು ಎನ್ನುತ್ತಾರೆ ಮುಖಂಡ ದೇವು ಜಡಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಪ್ರಸಕ್ತ ವರ್ಷ್ ಬಜೆಟ್ನಲ್ಲಿ ವಡಗೇರಾ ಮಿನಿ ವಿಧಾನಸೌಧಕ್ಕೆ ಅನುದಾನ ನೀಡಿಲ್ಲ. ಶನಿವಾರ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಅವರು ತಾಲ್ಲೂಕು ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ, ಎಲ್ಲಾ ತಾಲ್ಲೂಕು ಕಚೇರಿಗಳನ್ನು ಆರಂಭಿಸಬೇಕು ಎಂದು ಫಕೀರ್ ಅಹ್ಮದ್ ಮರಡಿ ಮನವಿ ಮಾಡಿದ್ದಾರೆ.