ಯಾದಗಿರಿ: ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ನೇರವಾಗಿ ತಮ್ಮನ್ನು ಭೇಟಿ ಮಾಡಬಹುದು ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.
ತಾಲ್ಲೂಕಿನ ಮುಂಡರಗಿ, ವರ್ಕನಹಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮತಕ್ಷೇತ್ರದ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ. ಎಲ್ಲ ಕಾಮಗಾರಿಗಳನ್ನು ಮುಗಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮುಂಡರಗಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಆರ್.ಒ.ಪ್ಲಾಂಟ್, ಸರ್ಕಾರಿ ಪ್ರಾಥಮಿಕ ಶಾಲೆಗೆ 2 ಕೋಣೆಗೆ ₹20 ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 8 ಕೊಠಡಿ ನಿರ್ಮಾಣಕ್ಕೆ ₹1 ಕೋಟಿ, ಆರ್.ಓ. ಪ್ಲಾಂಟ್ ನಿರ್ಮಾಣ, ಸಿಸಿರಸ್ತೆ ಹಾಗೂ ಇನ್ನಿತರ ಕಾಮಗಾರಿಗೆ ₹1.80 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.
ವರ್ಕನಹಳ್ಳಿ ಗ್ರಾಮದಲ್ಲಿ ಪೈಪ್ಲೈನ್ ಕಾಮಗಾರಿಗೆ ₹3 ಲಕ್ಷ, ಆರ್.ಓ. ಪ್ಲಾಂಟ್ನಿರ್ಮಾಣಕ್ಕೆ₹6 ಲಕ್ಷ, ಯಾದಗಿರಿ ಗಂಜ್ ರಸ್ತೆಯಿಂದ ಮೈಲಾಪುರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ₹4.18 ಕೋಟಿ, ಸಿಸಿರಸ್ತೆ ರಸ್ತೆ, ಚರಂಡಿ ನಿರ್ಮಾಣಕ್ಕೆ ಸೇರಿದಂತೆ ವಿವಿಧ ಕಾಮಗಾರಿಗೆ ₹4.73 ಕೋಟಿ ಅನುದಾನ ನೀಡಲಾಗಿದೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರ ರಾಚನಗೌಡ ಮುದ್ನಾಳ, ಪಿಡಿಒ ವಿಜಯಲಕ್ಷ್ಮಿ, ರಾಮಸಮುದ್ರ ಜಿಲ್ಲಾ ಪಂಚಾಯಿತಿ ಸದಸ್ಯ ಅಮರದೀಪ, ಕರೆಮ್ಮ ಮಾಳಿಕೇರಿ, ಹಾಜಪ್ಪ, ಶಾಂತಪ್ಪ ಗುಜಗನೂರ, ಮಲ್ಲಯ್ಯ ಪೂಜಾರಿ ಇದ್ದರು.