ಕಾಲುವೆಗೆ ನೀರು ಹರಿಸುವುದರಿಂದ ಕೆರೆ, ಹಳ್ಳ, ಹೊಂಡಗಳಿಗೆ ನೀರು ಬರುವುದರ ಜೊತೆಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿ ಬೊರವೆಲ್ ಗೂ ನೀರು ಬರುತ್ತದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ.ಅಲ್ಲದೆ ಶಹಾಪುರ ನಗರವು ಕಾಲುವೆ ನೀರಿನ ಮೇಲೆ ಅವಲಂಬಿತವಾಗಿದೆ. ಫಿಲ್ಟರ್ ಬೆಡ್ ಕೆರೆಯಲ್ಲಿ ನೀರು ಸಂಗ್ರಹಿಸಿ ನಗರದ ಜನತೆಗೆ ಸರಬರಾಜು ಮಾಡಲಾಗುತ್ತಿದೆ. ಈಗ ಸಂಗ್ರಹಿಸಿದ ನೀರು ತುಸು ಕಡಿಮೆಯಾಗಿದೆ. ಕಾಲುವೆಗೆ ನೀರು ಹರಿಸುವುದರಿಂದ ನಗರದ ಜನತೆಗೆ ಆತಂಕ ದೂರವಾಗಲಿದೆ ಎನ್ನುತ್ತಾರೆ ನಗರದ ನಿವಾಸಿ ರವಿ ಹಿರೇಮಠ.
ಅಲ್ಲದೆ ತಾಲ್ಲೂಕಿನ ಶೆಟ್ಟಿಕೇರಾ ಗ್ರಾಮದ ಬಳಿ ಮರಿಕುಂಟಾ ಕೆರೆಯ ನೀರು ಸದ್ಬಳಕೆ ಮಾಡಿಕೊಂಡು ತಾಲ್ಲೂಕಿನ ವನದುರ್ಗ, ಹೊಸಕೇರಾ, ಚೆನ್ನೂರ, ಶೆಟ್ಟಿಕೇರಾ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಎಂಟು ವರ್ಷದ ಹಿಂದೆ ₹5.50ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಅದರ ಬಗ್ಗೆ ತನಿಖೆಯಾಗಲಿ ಎಂದು ರೈತ ಮುಖಂಡ ಮಾನಪ್ಪ ಮನವಿ ಮಾಡಿದ್ದಾರೆ.