ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು

Last Updated 15 ಫೆಬ್ರುವರಿ 2023, 8:51 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಬುಧವಾರ ಜರುಗಿದೆ‌. ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿತ್ರಮ್ಮ (35) ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಗ್ರಾಮಕ್ಕೆ ನೀರು ಪೂರೈಸುವ ಪೈಪ್ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿ ನೀರು ಕಲುಷಿತವಾಗಿದೆ ಎಂದು ಗೊತ್ತಾಗಿದೆ. ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಬೇಧಿ ಉಲ್ಬಣವಾಗಿದೆ. 30 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಫೆ. 14 ರಂದು 24 ಜನ, ಫೆ.15 ರಂದು 6 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ.

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 15 ಜನ ದಾಖಲಾಗಿದ್ದು, ತೆಲಂಗಾಣದ ನಾರಾಯಣಪೇಟೆಯಲ್ಲಿ 3, ಉಳಿದವರಿಗೆ ಅನಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದಲ್ಲಿ ವೈದ್ಯರ ತಂಡ ಬೀಡು ಬಿಟ್ಟಿದೆ.
ಜಿಲ್ಲಾಸ್ಪತ್ರೆ ಅಧಿಕಾರಿಗಳ ಭೇಟಿ:
ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಡಿಎಚ್ಒ ಡಾ.ಗುರುರಾಜ ಹಿರೇಗೌಡರ್, ಜಿಲ್ಲಾ ಸರ್ಜನ್ ಡಾ.ರಿಜ್ವಾನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ರೋಗಿಗಳನ್ನು ಗುಣಪಡಿಸಲು ಸೂಕ್ತ ಚಿಕಿತ್ಸೆ ನೀಡುವಂತೆ ಡಿಎಚ್ಒ ಅಧಿಕಾರಿಗಳಿಗೆ ಸೂಚನೆ ಸೂಚನೆ ನೀಡಿದರು‌.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡರ್ ಸುದ್ದಿಗಾರರೊಂದಿಗೆ ಮಾತನಾಡಿ, '30 ಜನ ಅಸ್ವಸ್ಥಗೊಂಡಿದ್ದು, 15 ಜನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಮಗೆ ಮಾಹಿತಿ ಬಂದ ತಕ್ಷಣ ಅನಪುರ, ಪಿಎಚ್‌ಸಿ ಕೊಂಕಲ್ ನಲ್ಲಿ ಸರ್ವೇಕ್ಷಣಾಧಿಯನ್ನು ನೇಮಿಸಲಾಗಿದೆ. ಅನಪುರ ಗ್ರಾಮದಲ್ಲಿ ಮೂರು ತಂಡಗಳನ್ನು ರಚಿಸಲಾಗಿದೆ'‌ ಎಂದರು.

'ಒಂದೊಂದು ತಂಡದಲ್ಲಿ ಒಬ್ಬ ಮೆಡಿಕಲ್ ಆಫೀಸರ್, ಪಿಎಚ್ ಸಿಒ, ಮೂರು ಸಿಎಚ್ಸಿ ಗಳು, ಎಚ್ಐಒಯು ಹಾಗೂ ನಾಲ್ಕು ಆಶಾ ಕಾರ್ಯಕರ್ತರನ್ನು ನೇಮಿಸಲಾಗಿದೆ. ಅಧಿಕಾರಿಗಳ ತಂಡ ಅನಪುರ ಗ್ರಾಮದಲ್ಲಿ ಬೀಡು ಬಿಟ್ಟಿದೆ' ಎಂದು ವಿವರಿಸಿದರು‌.

'ಮೆಲ್ನೋಟಕ್ಕೆ ಕಲುಷಿತ ನೀರು ಸೇವನೆಯಿಂದ ಈ ಘಟನೆಯಾಗಿದೆ ಎಂಬ ಶಂಕೆಯಿದೆ. ಕರೆಮ್ಮ ದೇವಸ್ಥಾನ, ಚೌಡ ಕಟ್ಟಿ ಓಣಿಯಲ್ಲಿ ಪೈಪ್ ಲೈನ್ ಸೋರಿಕೆಯಿಂದ ಆಗಿದೆ ಎಂಬ ಶಂಕೆಯಿದೆ. ಗ್ರಾಮದ ನೀರಿನ ಟ್ಯಾಂಕ್, ಕೊಳವೆ ಬಾವಿಯಿಂದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ' ಎಂದರು.

'ಕುಡಿಯಲು ಯೋಗ್ಯವಲ್ಲದ ನೀರಿನ ಮೂಲ ಕೂಡಲೇ ನಿಲ್ಲಿಸಲು ಪಂಚಾಯಿತಿ ಪಿಡಿಒ ಗೆ ಪತ್ರ ಬರೆಯಲಾಗಿದೆ' ಎಂದು ಮಾಹಿತಿ ನೀಡಿದರು‌‌.

'ಸಾವಿತ್ರಮ್ಮ ಎಂಬುವವರು ಸಾವಿಗೀಡಾಗಿದ್ದಾರೆ.‌ ನಮ್ಮ ತಂಡದವರು ನಾರಾಯಣಪೇಟೆಗೆ ಹೋಗಿ ಸಾವಿಗೆ ಕಾರಣ ಏನು ಎಂಬುದು ಪತ್ತೆ ಹಚ್ಚುತ್ತಿದ್ದಾರೆ' ಎಂದು ಡಾ.ಗುರುರಾಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT