ಯಾದಗಿರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಗರ ಜಿಲ್ಲಾ ಪಂಚಾಯಿತಿ ಸದಸ್ಯೆ ಶರಣಮ್ಮ ನಾಗಪ್ಪ ಕಾಶಿರಾಜ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅರಕೇರಾ (ಜೆ) ಜಿಲ್ಲಾ ಪಂಚಾಯಿತಿ ಸದಸ್ಯ ಬಸಣ್ಣಗೌಡ ಯಡಿಯಾಪುರ ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಎಚ್.ಸಿ.ಪಾಟೀಲ ಇತರರು ಇದ್ದರು. ಜಿಲ್ಲಾ ಪಂಚಾಯಿತಿಯ 24 ಸದಸ್ಯರಲ್ಲಿ ಕಾಂಗ್ರೆಸ್ನ ಒಬ್ಬರು, ಬಿಜೆಪಿಯ ಒಬ್ಬರು ಸದಸ್ಯರು ನಿಧನರಾಗಿದ್ದಾರೆ. ಇದರಿಂದ 22 ಸ್ಥಾನಕ್ಕೆ ಕುಸಿತವಾಗಿದೆ.
ಈಗ ಕಾಂಗ್ರೆಸ್ 11, ಬಿಜೆಪಿ 10, ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, 12 ಬಹುಮತಕ್ಕೆ ಬೇಕಾಗಿರುವ ಸಂಖ್ಯೆಯಾಗಿದೆ.
ಕಾಂಗ್ರೆಸ್ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಸದಸ್ಯರಾದ ಬಸಣ್ಣಗೌಡ ಯಡಿಯಾಪುರ ಹಾಗೂ ಕಿಶನ್ ರಾಠೋಡ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ. ಇನ್ನು ಹತ್ತು ತಿಂಗಳು ಅಧಿಕಾರವಧಿ ಇದೆ.