ಸುರಪುರ: ‘ಇಂದು ದೇಶಕ್ಕಿಂತ ಜಾತಿ ಧರ್ಮವೇ ಮುಖ್ಯವಾಗಿದೆ. ಜಾತಿ ಧರ್ಮಗಳ ಸಂಘರ್ಷದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ. ದಲಿತರನ್ನು ಹಿಂದಿಕ್ಕುವ ಷಡ್ಯಂತ್ರ ನಡೆದಿದೆ. ಅಂಬೇಡ್ಕರ್ ಅಂದೇ ಪ್ರತ್ಯೇಕ ಮತ ದಾನದ ಬಗ್ಗೆ ಒಲವು ಹೊಂದಿ ದ್ದರು. ದಲಿತರು ಪ್ರತ್ಯೇಕ ಮತದಾನಕ್ಕೆ ಒತ್ತಾಯಿ ಸಬೇಕು’ ಎಂದು ಬೌದ್ಧ ಸಾಹಿತಿ ದೇವಿಂದ್ರ ಹೆಗಡೆ ಸಲಹೆ ನೀಡಿದರು.
ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಜಿಲ್ಲಾ ಸಾರಿಗೆ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಏರ್ಪಡಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತ್ಯುತ್ಸವ ದಲ್ಲಿ ಅವರು ಮಾತನಾಡಿದರು.
‘ದೇಶದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಕಲ್ಪಿಸುವ ಉದ್ದೇಶದಿಂದ ಆಂಬೇಡ್ಕರ್ 371ನೇ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ. ಈಗ ಜಾರಿಗೊಂಡಿರುವ ಈ ವಿಧಿ ಸರ್ಕಾರದ ಭಿಕ್ಷೆಯಲ್ಲ. ಅಂಬೇಡ್ಕರ್ ಅವರ ಕೊಡುಗೆ’ ಎಂದು ಪ್ರತಿಪಾದಿಸಿದರು.
‘ಆಂಬೇಡ್ಕರ್ ಸಂವಿಧಾನದತ್ತವಾಗಿ ನೀಡಿದ್ದ ಈ ಸೌಲಭ್ಯ ಎಂದೋ ಜಾರಿಯಾಗಬೇಕಿತ್ತು. ಆದರೆ, ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿ ದಲಿತರನ್ನು ಇನ್ನಷ್ಟು ಹಿಂದಿಕ್ಕುವ ರಾಜಕೀಯ ಷಡ್ಯಂತ್ರ ನಡೆಯಿತು. ಎಲ್ಲಾ ಜಾತಿ ಜನಾಂಗಕ್ಕೆ ಸಮಾನ ಅವಕಾಶ ಒದಗಿಸಿ ಕೊಟ್ಟ ಅಂಬೇಡ್ಕರ್ ಅವರನ್ನು ಯಾರೊಬ್ಬರೂ ಸ್ಮರಿಸದಿರುವುದು ದುರ್ದೈವ’ ಎಂದು ವಿಷಾದಿಸಿದರು.
‘ದಲಿತರು ಮೌಢ್ಯತೆ, ಕಂದಾಚಾ ರಗಳಿಂದ ಹೊರಬರಬೇಕು. ಶಾಪ ಕೊಡುವ ದೇವರಿಗಿಂತ ಬದುಕು ರೂಪಿಸುವ ಮಹಾತ್ಮರನ್ನು ಅನುಸರಿಸಿ. ಮಸ್ತಕ ಬೆಳೆಸುವ ಜ್ಞಾನಕ್ಕೆ ಒತ್ತುಕೊಡಿ. ಯಲ್ಲಮ್ಮ, ಕಲ್ಲಮ್ಮ, ಪಿಲಕಮ್ಮ, ಕೆಂಚಮ್ಮೆ, ಮಾರಮ್ಮ ದೇವರುಗಳ ಸಹವಾಸ ಬಿಡಿ. ದೇವರುಗಳಿಂದ ಉದ್ಧಾರವಿಲ್ಲ. ಶಿಕ್ಷಣದಿಂದ ಮಾತ್ರ ಬದುಕು ಬದಲಾಗಲು ಸಾಧ್ಯ’ ಎಂದು ತಿಳಿಸಿದರು.
ಸಾರಿಗೆ ಇಲಾಖೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷಕುಮಾರ ಗೋಗೇರಿ, ಕಲಬುರ್ಗಿ ಕಾರ್ಮಿಕ ಕಲ್ಯಾಣಾಧಿಕಾರಿ ಎಸ್.ಡಿ.ಸಾರಿಕಾರ, ಬೀದರ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್.ನಾಗೇಶ್, ಅಧಿಕಾರಿಗಳಾದ ಬಸವರಾಜ ಕಣ್ಣಿ, ಗಣಪತಿ ಗೋಳಾ, ಮಹಿಪಾಲ ಬೇಗಾರ, ಎನ್.ಕೆ.ಪಾಟೀಲ, ಜಯವಂತ ಹಣಮಂತರಾಯ, ನಿಜಪ್ಪ ಹೆಮನೂರ ಇದ್ದರು.