ಯಾದಗಿರಿ: ‘ಭಾರೀ ಅಂತರದಿಂದ ಗೆಲ್ಲಿಸಿದ್ದೀರಿ. ಶಾಸಕನಾಗಿ ನನ್ನ ಜವಾಬ್ದಾರಿ ಮರೆಯುವುದಿಲ್ಲ. ನಿಮ್ಮ ಸಮಸ್ಯೆ ಪರಿಹರಿಸುವುದೇ ನನ್ನ ಕರ್ತವ್ಯವಾಗಿದ್ದು, ಅದಕ್ಕಾಗಿ ನಿರಂತರ ಶ್ರಮಿಸುತ್ತೇನೆ’ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಶಾಸಕನಾಗಿ ಪ್ರಥಮ ಬಾರಿಗೆ ಕೊಂಕಲ್ ಗ್ರಾಮಕ್ಕೆ ಬಂದ ಅವರಿಗೆ ಶನಿವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಅಧಿಕಾರ ಇಲ್ಲದಾಗಲೂ ಜನರ ಸೇವೆ ಮಾಡುತ್ತಾ ಬಂದಿದ್ದೇನೆ. ಈಗ ನೀವು ಅಧಿಕಾರ ನೀಡಿದ್ದೀರಿ. ಅಧಿಕಾರ ದುರುಪಯೋಗಪಡಿಸದೇ ಕ್ಷೇತ್ರದ ಅಭಿವೃದ್ಧಿಗೆ ಪಣತೊಡಲಿದ್ದೇನೆ’ ಎಂದು ಹೇಳಿದರು.
‘40 ವರ್ಷಗಳ ಕಾಲ ರಾಜಕೀಯ ಅಜ್ಞಾತವಾಸ ಅನುಭವಿಸಿದ್ದೇನೆ. ಆ ಸಂದರ್ಭದಲ್ಲಿ ಅಧಿಕಾರ ಹಿಡಿದವರು ಪೊಲೀಸ್ ಶಕ್ತಿ ಬಳಸಿ ನಮ್ಮ ಧ್ವನಿ ಹತ್ತಿಕ್ಕಿದರು. ಜನರ ಮೇಲೆ ದೌರ್ಜನ್ಯ ನಡೆಸಿದರು. ಅಂತಹ ಯಾವ ದೌರ್ಜನ್ಯವನ್ನು ಜನರು ಸಹಿಸಿಕೊಳ್ಳುವ ಅಗತ್ಯ ಇಲ್ಲ’ ಎಂದರು.