ಹುಣಸಗಿ: ಇಂದಿನ ಸಮಾಜದಲ್ಲಿ ಸಾಮೂಹಿಕ ವಿವಾಹಗಳು ಹೆಚ್ಚಾಗುತ್ತಿವೆ. ಇದು ಒಳ್ಳೆಯ ಸೂಚನೆಯೂ ಹೌದು. ಇಂತಹ ವಿವಾಹದಿಂದ ಸಮಾಜದಲ್ಲಿ ಜಾತಿ ಭಾವನೆ ಹೋಗಿ ಸಾಮರಸ್ಯ ಮೂಡಲು ಸಾಧ್ಯ ಎಂದು ಶಾಸಕ ರಾಜುಗೌಡ ನುಡಿದರು.
ಮಂಗಳವಾರ ಹುಣಸಗಿ ಸಮೀಪದ ಜೋಗುಂಡಬಾವಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂತಹ ವಿವಾಹಗಳಲ್ಲಿ ಪಾಲ್ಗೊಳ್ಳುವುದು ದಂಪತಿ ಪೂರ್ಜಜನ್ಮದ ಪುಣ್ಯದ ಫಲದಿಂದ ಮಾತ್ರ ಸಾದ್ಯ, ಏಕೆಂದರೆ ಸಾಮಾನ್ಯ ಮದುವೆಗಳಲ್ಲಿ ವಿವಿಧ ಮಠಾಧಿಶರು ಪಾಲ್ಗೊಳ್ಳುವದಿಲ್ಲ.
ಸಾಮೂಹಿಕ ವಿವಾಹದಲ್ಲಿ ಹರ- ಗುರು ಚರಮೂರ್ತಿಗಳ ಆಶೀರ್ವಾದ ಲಭಿಸುತ್ತದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ದಂಪತಿಗೆ ಸರ್ಕಾರದಿಂದ ತಲಾ ಹತ್ತು ಸಾವಿರ ರೂಪಾಯಿ ಸಹಾಯ ಧನ ಕೊಡಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಸಿದ್ದ ಮಹಲಿನ ಮಠದ ವೀರಯ್ಯ ಅಪ್ಪನವರು ಆಶೀರ್ವಚನ ನೀಡುತ್ತಾ, ಸತಿಪತಿಗಳು ಒಂದಾಗಿ ಸಂಸಾರ ಎಂಬ ತೇರನ್ನು ಏಳೆಯಬೇಕು. ಒಬ್ಬರಿಗೊಬ್ಬರು ದಾಸಿಮಯ್ಯ- ದುಗ್ಗಳೆಯಂತೆ ಅರಿತು ನಡೆಯಿರಿ ಎಂದು ಆಶೀರ್ವದಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಗದ್ದೇಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಾಗನೂರ, ಜಿಪಂ ಸದಸ್ಯ ಎಚ್.ಸಿ.ಪಾಟೀಲ, ಯಲ್ಲಪ್ಪ ಕುರಕುಂದಿ, ರಾಜಾ ಹನುಮಪ್ಪನಾಯಕ, ರಾಜಾ ಪಾಮುನಾಯಕ, ಸುರೇಶ ಸಜ್ಜನ, ಬಸಣ್ಣ ಬಂಗಿ, ನೀಲಪ್ಪ ಪವಾರ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಅಂಕಲಿಮಠದ ಸ್ವಾಮೀಜಿ, ಗಿರಿಯ್ಪಪ ಪೂಜಾರಿ ಸೇರಿದಂತೆ ಅನೇಕ ಶ್ರೀಗಳು ನೂತನ ದಂಪತಿಗಳನ್ನು ಹರಸಿದರು. ಅಚ್ಚಪ್ಪಗೌಡ ಸ್ವಾಗತಿಸಿದರು. ಪಿಡಿಓ ಮಲ್ಲಿಕಾರ್ಜುನ ಕೋರಿ ವಂದಿಸಿದರು. ಮಲ್ಲಣ್ಣ ಗೂಳಿ ಕಾರ್ಯಕ್ರಮ ನಿರೂಪಿಸಿದರು.