ಹೊನ್ನಾವರ (ಉ.ಕ.ಜಿಲ್ಲೆ): ಸಮುದ್ರದಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರು ಪಾಲಾದ ಘಟನೆ ತಾಲ್ಲೂಕಿನ ಅಪ್ಸರಕೊಂಡ ಬೀಚ್ ಸಮೀಪ ಸೋಮವಾರ ಸಂಭವಿಸಿದೆ.
ನೀರುಪಾಲಾದ ವಿದ್ಯಾರ್ಥಿಗಳನ್ನು ರಾಯಲ್ಕೇರಿಯ ರಘುವೀರ ಆರ್. ನಾಯ್ಕ (17) ಹಾಗೂ ಸಂದೀಪ ಶಂಕರ ಆಚಾರಿ (17) ಎಂದು ಗುರುತಿಸಲಾಗಿದೆ. ನೀರಲ್ಲಿ ಮುಳುಗುತ್ತಿದ್ದ ಮತ್ತೊಬ್ಬ ಯುವಕ ಗುಂಡಬಾಳಾದ ಸುಬ್ರಹ್ಮಣ್ಯ ಶಂಕರ ನಾಯ್ಕ ಎಂಬಾತನನ್ನು ಸುತ್ತಮುತ್ತಲಿನ ಜನರು ರಕ್ಷಿಸಿದ್ದಾರೆ.
ರಘುವೀರನ ಶವ ಪತ್ತೆಯಾಗಿದ್ದು ಸಂದೀಪನ ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗುಗಾರರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ರಘುವೀರ ಇಲ್ಲಿಯ ಎಸ್.ಡಿ.ಎಂ. ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ಸಂದೀಪ ಪ್ರತಿಭೋದಯದಲ್ಲಿ ಕಂಪ್ಯೂಟರ್ ವ್ಯಾಸಂಗ ಮಾಡುತ್ತಿದ್ದರು. ಮಂಕಿ ಪೊಲೀಸ್ ಠಾಣೆಯ ಸಿ.ಎಚ್.ಸಿ. ಚಂದ್ರಶೇಖರ ನಾಯ್ಕ ಪ್ರಕರಣ ದಾಖಲಿಸಿದ್ದಾರೆ.