ಬಳ್ಳಾರಿ: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮಕ್ಕೆ ಬುಧವಾರ ಉಪ ಚುನಾವಣೆ ಪ್ರಚಾರಾರ್ಥ ತೆರಳಿದ ಬಿಜೆಪಿ ಮುಖಂಡರು ಗ್ರಾಮದ ಯರ್ರಿಸ್ವಾಮಿ ತಾತನವರ ಮಠಕ್ಕೆ ಭೇಟಿ ನೀಡಿ, ಬೇಡಿಕೆ ಈಡೇರಿಸುವಂತೆ ಕೋರಿ ಮಠದಲ್ಲಿರುವ ತೊಟ್ಟಿಲು ತೂಗಿದರು.
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಜತೆಯಾಗಿ ಯರ್ರಿಸ್ವಾಮಿ ತೊಟ್ಟಿಲು ತೂಗಿ, ಮನದಲ್ಲಿರುವ ಬಯಕೆಯನ್ನು ಈಡೇರಿಸುವಂತೆ ಕೋರಿದರು.
ಹತ್ತುಹಲವು ಸಮಸ್ಯೆಗಳನ್ನು ಪರಿಹರಿಸುವಂತೆ, ಬಯಕೆಗಳನ್ನು ಈಡೇರಿಸುವಂತೆ ಭಕ್ತರು ಈ ತೊಟ್ಟಿಲು ತೂಗುವುದು ವಾಡಿಕೆ. ಅದರಂತೆಯೇ ಈ ಮೂವರೂ ಮುಖಂಡರೂ ದೇವಸ್ಥಾನಕ್ಕೆ ತೆರಳಿ, ಗದ್ದುಗೆಯ ದರ್ಶನ ಪಡೆದ ನಂತರ ತೊಟ್ಟಿಲು ತೂಗಿ ಮೂರು ನಿಮಿಷಗಳ ಕಾಲ ಧ್ಯಾನಾಸಕ್ತರಾಗಿ ಬೇಡಿಕೆ ಈಡೇರಿಸುವಂತೆ ಮನದಲ್ಲೇ ಕೋರಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
ಡಿನೋಟಿಫಿಕೇಶನ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೆಸರಿರುವುದರಿಂದ ಎಲ್ಲ ಸಮಸ್ಯೆ ಪರಿಹರಿಸುವಂತೆ ಯಡಿಯೂರಪ್ಪ ಕೋರಿರಬಹುದು ಎಂದು ಅಲ್ಲಿದ್ದ ಕೆಲವರು ಮಾತನಾಡಿಕೊಂಡರು.