ದಾವಣಗೆರೆ:ಭದ್ರಾ ಕಾಲುವೆ ನೀರನ್ನು ಜ. 1ರ ಬದಲು 20ರಿಂದ ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೀಡಿದ ಬಂದ್ ಕರೆಗೆ ನಗರದಲ್ಲಿ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಬಸ್ ಮೇಲೆ ಕಲ್ಲು ತೂರಾಟ, ತಹಶೀಲ್ದಾರ್ ಕಚೇರಿಯಲ್ಲಿ ದಾಂದಲೆ, ಶಾಸಕ ಬಸವರಾಜ ನಾಯ್ಕ ಮನೆಗೆ ಮುತ್ತಿಗೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಯತ್ನದಂತಹ ಘಟನೆಗಳೂ ನಡೆದವು.
ಬೆಳಿಗ್ಗೆಯಿಂದಲೇ ನಗರದ ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಟ್ರ್ಯಾಕ್ಟರ್, ಬೈಕ್ ಹಾಗೂ ಇತರ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.