ದಾವಣಗೆರೆ: ಯಾವ ದೇವರೂ ಪ್ರಾಣಿ ಬಲಿಯಿಂದ ಒಲಿಯುವುದಿಲ್ಲ. ಕೆಲವು ಪಟ್ಟಭದ್ರರ ಕುಯುಕ್ತಿಯಿಂದ ಈ ಅನಿಷ್ಟ ಪದ್ಧತಿ ಬೆಳೆದು ಬಂದಿದೆ. ಇದರಿಂದ ಕೆಳವರ್ಗದವರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ.
- ಇದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿನುಡಿ.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಪ್ರಾಣಿ ಬಲಿ ವಿರೋಧಿಸಿ ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಿ ಬಲಿಯ ಜತೆಗೆ ಹಲವಾರು ಸಾಮಾಜಿಕ ಅನಿಷ್ಟಗಳೂ ಹುಟ್ಟಿಕೊಳ್ಳುತ್ತವೆ. ಬಲಿಯನ್ನು ವೈಯಕ್ತಿಕವಾಗಿ ಎಲ್ಲರೂ ವಿರೋಧಿಸುತ್ತಾರೆ. ಆದರೆ, ಸಾರ್ವಜನಿಕವಾಗಿ ವಿರೋಧ ಬರುವುದಿಲ್ಲ. ರಾಜಕಾರಣಿಗಳೂ ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವೈದಿಕರ ಹೋಮ-ಹವನಗಳಲ್ಲಿ ಅಗಾಧ ಪ್ರಮಾಣದ ಅಕ್ಕಿ, ಹಾಲು, ತುಪ್ಪವನ್ನು ವ್ಯರ್ಥಗೊಳಿಸುವುದು ಸಲ್ಲದು. ಪತ್ರೆಯಲ್ಲಿ ಪೂಜಿಸಿದರೂ ದೇವರು ಒಲಿಯುತ್ತಾನೆ. ಈ ಬಗ್ಗೆ ಜಾಗೃತಿಗೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ನುಡಿದರು.
ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಮಾತನಾಡಿ, ಪ್ರಾಣಿಬಲಿ ಕೊಡುವಲ್ಲಿ ಸಹಜವಾದ ಭಕ್ತಿ ಇರುವುದಿಲ್ಲ. ಈ ಬಗ್ಗೆ ಆಯಾ ಸಮಾಜದ ನೇತಾರರಿಗೆ ಮನವರಿಕೆ ಮಾಡಬೇಕು. ಪ್ರಗತಿಪರ ಚಿಂತನೆ, ಜನಜಾಗೃತಿ ಒಟ್ಟಿಗೇ ಆಗಬೇಕು ಎಂದು ಹೇಳಿದರು.
ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ ನಿಲ್ಲಬೇಕು. ಇಂಥ ಪದ್ಧತಿ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.
ಮುಖಂಡರಾದ ಟಿ. ದಾಸಕರಿಯಪ್ಪ, ಆವರಗೆರೆ ಚಂದ್ರು, ಚಿಂತಕ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು.