ಕೊಪ್ಪಳ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ಸಲುವಾಗಿ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಸತತ ಅಧ್ಯಯನ, ಓದಿದ್ದನ್ನು ಬರೆಯುವುದು ಹಾಗೂ ಗುಂಪು ಚರ್ಚೆಗಳ ಮೂಲಕ ಪುನರಾವರ್ತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಭವಿಷ್ಯದ ಬದುಕು ಉತ್ತಮಗೊಳ್ಳಬೇಕು ಎಂದು ಈಗಿನ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದೂ ಅವರು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎ.ಜಿ.ಶರಣಪ್ಪ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಸೋಮಶೇಖರ ಹರ್ತಿ, ಹಿರಿಯ ಶಿಕ್ಷಕ ಯಲ್ಲಪ್ಪ ಬಂಡಿ, ಸಹ ಶಿಕ್ಷಕರಾದ ಸುನಿಲ್ ಹಾಗೂ ಪವಿತ್ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಶರಣಪ್ಪ ಕುಂಬಾರ ಅವರು ಇಂಗ್ಲಿಷ್ ವಿಷಯ ಅಧ್ಯಯನ ಹಾಗೂ ಪರೀಕ್ಷೆಯಲ್ಲಿ ಉತ್ತರ ಬರೆಯುವ ಕೌಶಲ ಕುರಿತು ಮಾಹಿತಿ ನೀಡಿದರು. ಅದೇ ರೀತಿ ವಿಜ್ಞಾನ ಕುರಿತು ರಾಜೇಶ ಅಂಗಡಿ, ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಬಿಡಿಸುವ ಬಗ್ಗೆ ಅನ್ನಪೂರ್ಣ ಅವರು ತರಬೇತಿ ನೀಡಿದರು.
ಪ್ರೌಢಶಾಲಾ ವಿಭಾಗದ ವೀರಯ್ಯ ಸಜ್ಜದಮಠ ನಿರೂಪಣೆ ಮಾಡಿದರು ಹಾಗೂ ರಾಜೇಂದ್ರ ಬಡಿಗೇರ ವಂದನಾರ್ಪಣೆ ನೆರವೇರಿಸಿದರು. ಇರಕಲ್ಲಗಡ ಪ್ರೌಢಶಾಲೆ ಹಾಗೂ ಲೇಬಗೇರಿ ಪ್ರೌಢಶಾಲೆಯ ಒಟ್ಟು 200 ಜನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.