ಸವಣೂರ: ‘ಜನರ ಹಣದಲ್ಲಿ ಅಧಿಕಾರ ನಡೆಸುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಡವರ, ಗ್ರಾಮಿಣ ಭಾಗದ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ಬದುಕಿನಲ್ಲಿ ಗೌರವ ಪಡೆಯಲು ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಕಳಲಕೊಂಡ ಗ್ರಾಮದ ಗಣೇಶ ದೇವಸ್ಥಾನ ಕಟ್ಟಡಕ್ಕೆ ಶಂಕು ಸ್ಥಾಪನೆ, ಗ್ರಾಮದೇವಿ ಹಾಗೂ ಕರಿಯಮ್ಮದೇವಿ ದೇವಸ್ಥಾನ ಗೋಪುರಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ರೈತರ ಬಗ್ಗೆ ಕಾಳಜಿ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೃಷಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಕುರಿತು ಗಮನ ಹರಿಸುತ್ತಿಲ್ಲ’ ಎಂದು ದೂರಿದರು. ‘ಕಳಲಕೊಂಡ ಗ್ರಾಮದ ಉಳಿದ ಕಾಮಗಾರಿಗಳಿಗೆ ಸದ್ಯವೇ ಚಾಲನೆ ನೀಡಲಾಗುವುದು’ ಎಂದ ಅವರು, ‘ ಸ್ಮಶಾನ ನಿರ್ಮಾಣ, ಕೆರೆಗಳನ್ನು ತುಂಬಿಸಲು ಒತ್ತು ನೀಡಲಾಗುವುದು. ಎಲ್ಲರೂ ಶೌಚಾಲಯ ಕಟ್ಟಿಕೊಳ್ಳಬೇಕು’ ಎಂದರು. ಆಗ ಪ್ರತಿಕ್ರಿಯಿಸಿದ ಗ್ರಾಮಸ್ಥರು, ‘ಶೌಚಾಲಯ ಕಟ್ಟಿಕೊಂಡು ವರ್ಷ ಕಳೆದರೂ ಸಹಾಯ ಧನ ಮಂಜೂರಾಗಿಲ್ಲ’ ಎಂದರು.
ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ‘ಇಲ್ಲಿನ ಗ್ರಾಮಸ್ಥರು ರಾಜಕಾರಣಿಗಳಿಂದ ಕೆಲಸ ತೆಗದುಕೊಳ್ಳುವುದರಲ್ಲಿ ನಿಪುಣರು. ನಾನು ಶಾಸಕನಾಗಿದ್ದಾಗ ೧೨೦ ಆಶ್ರಯ ಮನೆ ಮಂಜೂರು, ಸಿ.ಸಿ. ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯ ಮಾಡಲಾಗಿತ್ತು’ ಎಂದರು. ‘₨20ಕೋಟಿ ಅನುದಾನದಲ್ಲಿ ಇಲ್ಲಿನ 9 ಕೆರೆ ತುಂಬಿಸುವ ಕೆಲಸ ಬೇಗನೇ ಪೂರ್ಣಗೊಳಿಸಬೇಕು’ ಎಂದು ಸಚಿವರನ್ನು ಒತ್ತಾಯಿಸಿದರು.
ಷಡಕ್ಷರಯ್ಯ ಬೇಟಗೇರಿ, ರೈತ ಸಿದ್ದನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಸವರಾಜ ಕೋಳಿವಾಡ, ಫಕ್ಕೀರಗೌಡ ಕುಂದೂರ, ಜಲ್ಲಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸನಗೌಡ ನಿಂಗನಗೌಡ್ರ,ಉಪಾಧ್ಯಕ್ಷೆ ರೇಖಾ ತಡಸದ, ಸದಸ್ಯ ಶೇಖಪ್ಪ ಹಿರೇಗೌಡ್ರ, ಶಿವಬಸಪ್ಪ ಮತ್ತೂರ, ಕುಮಾರ ಉಗ್ಗಮ್ಮನವರ, ಶಾರವ್ವ ಹರಿಜನ, ಎಪಿಎಂಸಿ ಸದಸ್ಯ ಮಲ್ಲೂರ, ಈಶ್ವರಪ್ಪ ನೆಗಳೂರ, ಶಿವಪ್ಪ ಹತ್ತಿ, ಖಂಡಪ್ಪ ನೆಗಳೂರ, ಭರಮಪ್ಪ ಹರಿಜನ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.