ಬೀದರ್: ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಜೈಲುವಾಸಿಗಳಿಗೆ ಹಬ್ಬದ ಸಡಗರ. ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜೈಲುವಾಸಿಗಳಿಗೆ `ರುದ್ರಾಕ್ಷಿ ರಾಖಿ~ ಕಟ್ಟುವ ಮೂಲಕ ಭಿನ್ನವಾಗಿ ರಕ್ಷಾ ಬಂಧನ ಆಚರಿಸಲಾಯಿತು.
ಬಸವ ದಳದ ಕಾರ್ಯಕರ್ತೆಯರು ಕೈದಿಗಳಿಗೆ ರುದ್ರಾಕ್ಷಿ ಆಕಾರದ ರಾಖಿ ಕಟ್ಟಿ, ವಿಭೂತಿ ಹಚ್ಚಿ, ಸಿಹಿ ತಿನ್ನಿಸಿದರು. ಇನ್ನೊಂದೆಡೆ, ಮಹಿಳಾ ವಿಚಾರಣಾಧೀನ ಕೈದಿಗಳು ಬಸವ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯ ಅತಿಥಿಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.
ಸಾನ್ನಿಧ್ಯ ವಹಿಸಿದ್ದ ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ, `ಕಾರಾಗೃಹ ತಪ್ಪು ಮಾಡಿದವರ ಮನ ಪರಿವರ್ತನೆಗೆ ಒಂದು ತರಬೇತಿ ಶಾಲೆ. ಕೈದಿಗಳು ತಾವು ಜೈಲಿನಲ್ಲಿದ್ದೇವೆ ಎಂಬ ಭಾವನೆ ತೊರೆದು ಮನ ಪರಿವರ್ತನೆ ಮಾಡಿಕೊಳ್ಳಲು ಪ್ರಯತ್ನಿಸಬೇಕು~ ಎಂದು ಕಿವಿಮಾತು ಹೇಳಿದರು. `
ಶರಣರ ವಚನಗಳು ಅಪರಾಧ ಸ್ಥಾನದಲ್ಲಿ ನಿಲ್ಲಿಸುವ ಸಂದರ್ಭಗಳಲ್ಲಿ ಪಾಲ್ಗೊಳ್ಳದಂತೆ ಮಾರ್ಗದರ್ಶನ ನೀಡುತ್ತವೆ. ಕೈದಿಗಳು ವಚನಗಳ ತತ್ವಗಳನ್ನು ತಮ್ಮ ಜೀವನದಲ್ಲಿ ಅನುಸರಿಸುವ ಮೂಲಕ ಇಂಥ ಲೋಪ ಆಗದಂತೆ ನೋಡಿಕೊಳ್ಳಬೇಕು~ ಎಂದು ಸಲಹೆ ಮಾಡಿದರು.
ಕಾರಾಗೃಹದ ಅಧಿಕಾರಿ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಬಸವ ಮಂಟಪದ ಮಾತೆ ನಿಶ್ಚಲಾಂಬಾ ಹಾಜರಿದ್ದರು. ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ್ ಹಾರೊರಗೇರಿ, ಪ್ರಮುಖರಾದ ಸಿದ್ಧರಾಮಪ್ಪ ಕಮಲಾಪುರೆ, ಹಾವಶೆಟ್ಟಿ ಪಾಟೀಲ್, ಕುಶಾಲರಾವ್ ಪಾಟೀಲ್, ಸುರೇಶಕುಮಾರ ಸ್ವಾಮಿ, ಬಸವರಾಜ ಉಪಸ್ಥಿತರಿದ್ದರು. ಭಾರತಿ ಪಾಟೀಲ್ ಸ್ವಾಗತಿಸಿದರು. ಬಸವಕುಮಾರ ಚಟ್ನಳ್ಳಿ ನಿರೂಪಿಸಿದರು. ಮಹಾರುದ್ರ ಡಾಕುಳಗಿ ವಂದಿಸಿದರು.