ಚಿಕ್ಕಮಗಳೂರು: ಚಿ.ಕೊ. ಬ್ಯಾಂಕ್ ಶಾಖೆ ಸ್ಥಳಾಂತರ ವಿರೋಧಿಸಿ ಕಡೂರು ತಾಲ್ಲೂಕು ವಕ್ಕಲಗೆರೆ ಗ್ರಾಮಸ್ಥರು, ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ನಗರದ ಬ್ಯಾಂಕ್ ಮುಖ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
30 ವರ್ಷಗಳ ಹಿಂದೆ ವಕ್ಕಲಗೆರೆಯಲ್ಲಿ ಆರಂಭವಾದ ಚಿ.ಕೊ. ಬ್ಯಾಂಕ್ ಶಾಖೆ ಠೇವಣಿ ಸಂಗ್ರಹ, ಸಾಲ ವಿತರಣೆ-ವಸೂಲಿಯಲ್ಲಿ ಮುಂಚೂಣಿಯಲ್ಲಿತ್ತು. ಇಲ್ಲಿ ರೈತರು ರೂ. 2 ಕೋಟಿ ಠೇವಣಿ ಇಟ್ಟಿದ್ದಾರೆ. 3500ಕ್ಕೂ ಹೆಚ್ಚು ಆರ್ಡಿ-ಎಸ್ಬಿ ಖಾತೆಗಳಿವೆ. 15 ವರ್ಷ ಹಿಂದೆ ವ್ಯವಸ್ಥಾಪಕರಾಗಿ ಬಂದವರು ಜನರ ನಂಬಿಕೆ ಕಳೆದುಕೊಂಡಿದ್ದರಿಂದ ವ್ಯವಹಾರ ಕುಂಠಿತಗೊಂಡಿತು ಎಂದು ದೂರಿದರು.
12 ಹಳ್ಳಿಗಳನ್ನು ಈ ಶಾಖೆ ಹೊಂದಿದೆ. 3 ಪ್ರೌಢಶಾಲೆ, ಪಿಯು ಕಾಲೇಜು, 4 ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಚಾಯಿತಿ ಕಾರ್ಯಾಲಯ ಈ ಶಾಖೆಯಲ್ಲಿಯೇ ವ್ಯವಹರಿಸುತ್ತಿವೆ. ಬ್ಯಾಂಕ್ 5 ವರ್ಷಗಳಿಂದ ಯಾವುದೇ ಸಾಲ ನೀಡುತ್ತಿಲ್ಲ. ರೈತರಿಗೆ ಹಿಂದಿನ ಸಾಲವನ್ನೇ ನವೀಕರಿಸುತ್ತಿದೆ ಎಂದು ದೂರಿದ್ದಾರೆ.
ಗ್ರಾಮ ಶಾಖೆ ಪದಾಧಿಕಾರಿಗಳಾದ ಸಿದ್ಧಪ್ಪ, ಮಲ್ಲಪ್ಪ, ಓಂಕಾರಪ್ಪ, ಎಂ.ರಾಜಪ್ಪ, ಈಶ್ವರಪ್ಪ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಗುರುಶಾಂತಪ್ಪ, ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಕೆ.ಶಶಿಧರ, ತಾಲ್ಲೂಕು ಮುಖಂಡರಾದ ಚಂದ್ರೇಗೌಡ, ಬಸವರಾಜ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.