ದಾವಣಗೆರೆ:ಕೈಮಗ್ಗ ಮತ್ತು ಜವಳಿ ಇಲಾಖೆ ಜಾರಿಗೆ ತಂದಿರುವ ~ಸುವರ್ಣ ವಸ್ತ್ರನೀತಿ ಯೋಜನೆ~ ಅಡಿಯಲ್ಲಿ ತರಬೇತಿ ಪಡೆಯುವ ಮೂಲಕ ಗ್ರಾಮೀಣ ಮಹಿಳೆಯರು ಸಬಲತೆಯತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸಹನಾ ರವಿ ಕರೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ, ಅಕಾಡೆಮಿ ಆಫ್ ಕ್ರಿಯೇಟಿವ್ ಎಜುಕೇಷನ್ ಹಾಗೂ ಸಿದ್ಧ ಉಡುಪು ತಯಾರಿಕೆ ಕೌಶಲ ಅಭಿವೃದ್ಧಿ ಕೇಂದ್ರದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ~ಹೊಲಿಗೆ ಯಂತ್ರ (ಕೈಗಾರಿಕಾ) ನಿರ್ವಹಣಾ ತರಬೇತಿ~ ಸಮಾರೋಪ ಸಮಾರಂಭದಲ್ಲಿ ಫಲಾನುಭವಿಗಳಿಗೆ ಶಿಷ್ಯ ವೇತನದ ಚೆಕ್ ವಿತರಿಸಿ ಅವರು ಮಾತನಾಡಿದರು.
ಜವಳಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸಫಾರೆ ಮಾತನಾಡಿ, ಸುವರ್ಣ ವಸ್ತ್ರನೀತಿ ಮೂಲಕ ಐದು ವರ್ಷದಲ್ಲಿ ರಾಜ್ಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. ಅಕಾಡೆಮಿ ಕಾರ್ಯದರ್ಶಿ ಅಶೋಕ ರಾಯಬಾಗಿ, ಜವಳಿ ಇಲಾಖೆ ಅಧಿಕಾರಿ ರೇಖಾ, ರವಿ, ಅಶ್ವಿನಿ ರಾಯಬಾಗಿ, ಜಗದೀಶ್ ಕೆರೊಡಿ, ಮೋತಿ ಸಿಕ್ವೇರ್, ಎಂ.ಎನ್. ಕಲ್ಲೇಶ್ ಉಪಸ್ಥಿತರಿದ್ದರು.