ಧಾರವಾಡ: ನಗರದಲ್ಲಿ ಶನಿವಾರ ಆರಂಭಗೊಂಡ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಬಳಗದ ‘ಕಾಂಪಿಟಿಟಿವ್ ಎಜು ಎಕ್ಸ್ ಪೊ’ಗೆ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಆಕ್ಷಾಂಕ್ಷಿಗಳ ‘ಸಾಗರವೇ’ ಹರಿದುಬಂದಿತು.
ಕಾರ್ಯಕ್ರಮ ನಡೆದ, ಹಳಿಯಾಳ ರಸ್ತೆಯ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸಾವಿರಾರು ಮಂದಿ ಕಿಕ್ಕಿರಿದು ಸೇರಿದ್ದರು. ಅಲ್ಲದೆ ರಸ್ತೆಯ ತುಂಬಾ ವಿದ್ಯಾರ್ಥಿಗಳೇ ತುಂಬಿ ಹೋಗಿದ್ದರು. ಸಭಾಂಗಣದ ಹೊರಭಾಗದಲ್ಲಿ ಪ್ರೊಜೆಕ್ಟರ್ ಹಾಕಿ, ನೂರಾರು ಮಂದಿಗೆ ಅಲ್ಲಿಂದಲೇ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಯಿತು.
ನೆರೆದ ಯುವಸಮೂಹದ ಕಂಗಳಲ್ಲೆಲ್ಲ ಐಎಎಸ್, ಐಪಿಎಸ್ ಅಧಿಕಾರಿಯಾಗುವ ಕನಸು ಮಿನುಗಿದಂತೆ ಕಂಡು ಬಂತು. ಅಂತೆಯೇ ಕಾರ್ಯಾಗಾರದಲ್ಲಿ ಬೆಂಗಳೂರಿನ ಡಿಸಿಪಿ ರವಿ ಚನ್ನಣ್ಣವರ ಮಾತುಗಳನ್ನು ತದೇಕ ಚಿತ್ತದಿಂದ ಆಲಿಸಿದರು.
ಧಾರವಾಡ, ಹುಬ್ಬಳ್ಳಿಯಿಂದ ಅಷ್ಟೇ ಅಲ್ಲದೆ, ಬೇರೆ ಬೇರೆ ಜಿಲ್ಲೆಗಳಿಂದಲೂ ಯುವಕ– ಯುವತಿಯರು ಬಂದಿದ್ದರು. ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದವರೂ ಉನ್ನತ ಹುದ್ದೆಯ ಕನಸು ಹೊತ್ತು ಬಂದಿದ್ದರು.
ರವಿ ಚನ್ನಣ್ಣವರ ಮಾತನಾಡಿ, ‘ಹಿಂದೆ ರಾಜನ ಮಗ ರಾಜನಾಗುತ್ತಿದ್ದ. ಮಂತ್ರಿಯ ಮಗ ಮಂತ್ರಿಯಾಗುತ್ತಿದ್ದ. ಆದರೆ ಈಗ ಹಾಗಿಲ್ಲ. ಜಗತ್ತನ್ನು ಜ್ಞಾನ ಆಳುತ್ತಿದೆ. ಜ್ಞಾನದಿಂದ ಜಗತ್ತಿನಲ್ಲಿ ಯಾವ ಸಾಧನೆ ಬೇಕಾದರೂ ಮಾಡಬಹುದು’ ಎಂದರು.
ಧಾರವಾಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ರಾಯಮಾನೆ ಅವರೂ ಸಹ ತಮ್ಮ ಸಾಧನೆಯವನ್ನು ವಿವರಿಸಿದರು.
‘ಭಗತ್ ಸಿಂಗ್ ಆತ್ಮಚರಿತ್ರೆಯನ್ನು ಓದಿ’
‘ದೇಶ ಪ್ರೇಮದ ಬಗ್ಗೆ ಈಗ ತಪ್ಪು ಕಲ್ಪನೆಗಳಿವೆ. ಕನ್ನಡದಲ್ಲಿ ರಾಹು (ಆರ್.ಕೆ.ಹುಡಗಿ) ಬರೆದಿರುವ ಭಗತ್ ಸಿಂಗ್ ಅವರ ಆತ್ಮಚರಿತ್ರೆಯನ್ನು ಎಲ್ಲರೂ ಓದಬೇಕು. ಆಗ ದೇಶ ಪ್ರೇಮ ಎಂದರೇನು ಎಂಬುದು ತಿಳಿಯುತ್ತದೆ’ ಎಂದು ರವಿ ಚನ್ನಣ್ಣನವರ ಹೇಳಿದರು.
‘ಬಡವರಿಲ್ಲದ, ಶಿಕ್ಷಣ ವಂಚಿತರಿಲ್ಲದ, ನಿರುದ್ಯೋಗಿಗಳಿಲ್ಲದ ಭಗತ್ ಸಿಂಗ್ ಕನಸಿನ ಭಾರತ ನಮ್ಮದಾಗಬೇಕು. ಜಾತಿ, ಧರ್ಮ, ಮೇಲು, ಕೀಳು, ಕರಿಯ–ಬಿಳಿಯರ ನಡುವೆ ತಾರತಮ್ಯವಿಲ್ಲದ ಭಾರತ ನಮ್ಮದಾಗಬೇಕು. ಇದು ನಮ್ಮ ಕನಸಾಗಬೇಕು’ ಎಂದು ತಿಳಿಸಿದರು.