ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ: ಅರಿವಿಗೂ ನಲಿವಿಗೂ

Last Updated 7 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಇನ್ನೇನು ದಸರೆಯ ರಜೆಗಳು ಬರಲಿವೆ. ನಾವೆಲ್ಲರೂ ಕಲಿಯಬೇಕಾದ ಒಂದು ಮಹತ್ವದ ಕಲೆಯೆಂದರೆ ಜಾಣ್ಮೆಯಿಂದ ರಜೆಯನ್ನು ಬಳಸಿಕೊಳ್ಳುವುದು. ಸಾಮಾನ್ಯವಾಗಿ ದಿನವಿಡಿ ಯಾವುದೋ ಒಂದು ಕೆಲಸದಲ್ಲಿ ತೊಡಗಿರುವ ನಾವು ರಜೆ ಬಂದರೆ ಖುಷಿಯಿಂದ ಕಾಲ ಕಳೆದುಬಿಡುತ್ತೇವೆ. ಬದಲಾಗಿ ಅದನ್ನು ಸ್ವಲ್ಪ ಯೋಜಿಸಿ ಬಳಸಿಕೊಂಡರೆ ರಜೆಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದು ಕೇವಲ ವಿದ್ಯಾರ್ಥಿಗಳಾಗಿದ್ದಾಗ ಮಾತ್ರವಲ್ಲ, ಇಡೀ ಜೀವನಕ್ಕೂ ಅನ್ವಯಿಸುತ್ತದೆ. ಎಷ್ಟೋ ಜನ ಯಶಸ್ವಿ ವ್ಯಕ್ತಿಗಳ ಯಶಸ್ಸಿನ ಗುಟ್ಟು ಯೋಜನೆಯೇ ಆಗಿರುತ್ತದೆ. ಅವರು ಸಾಮಾನ್ಯವಾಗಿ ಮುಂದಿನ ಮೂರು ಇಲ್ಲ ನಾಲ್ಕು ವರ್ಷಗಳಿಗೂ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹಾಗೆಯೇ ನಿಯಮಿತವಾಗಿ ಕೆಲಸವನ್ನೂ ಮಾಡುತ್ತಾರೆ. ಇರಲಿ ನಾವೂ ಆ ಕಲೆಯನ್ನು ಕಲಿಯೋಣ.

ಈಗ ನಮಗೆ ದಸರಾಹಬ್ಬದ ಪ್ರಯುಕ್ತ ಸುಮಾರು ಇಪ್ಪತ್ತು ದಿನಗಳ ಕಾಲದ ರಜೆ ಸಿಗುತ್ತದೆ. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯವರಿಗೆ ವಿಶೇಷ ತರಗತಿ ಮನೆಪಾಠ ಇತ್ಯಾದಿಗಳಿರಬಹುದು. ಅದು ಹಾಗೇ ಆಗಲಿ. ಉಳಿದಂತೆ ನಾವು ಯೋಜಿಸೋಣ.

ಮೊತ್ತಮೊದಲಿಗೆ ನಾವು ಮಾಡಬೇಕಿರುವುದು..
ಶಾಲೆ/ಕಾಲೇಜಿನವರು: ಈ ರಜೆಯಲ್ಲಿ ಮಾಡಿ ಎಂದಿರುವುದನ್ನು ಆದಷ್ಟೂ ಬೇಗ ಮಾಡಿ ಮುಗಿಸಿಕೊಂಡುಬಿಡುವುದು. ನಮ್ಮ ಗುರಿ, ಬೇರೆ ಕೆಲಸಗಳೇನೇ ಇದ್ದರೂ ಅವೆಲ್ಲವನ್ನೂ ಬದಿಗಿಟ್ಟು ಇದನ್ನು ಮುಗಿಸಿಕೊಳ‍್ಳಬೇಕು. ಏಕೆಂದರೆ ಇದು ನಮ್ಮ ಮೊದಲ ಕರ್ತವ್ಯ. ಯಾವುದು ನಮ್ಮ ಪ್ರಾಥಮಿಕ ಕರ್ತವ್ಯವೋ ಅದನ್ನು ಗುರುತಿಸಿ ಮೊದಲ ಆದ್ಯತೆಯಲ್ಲಿ ಮಾಡಿ ಮುಗಿಸಿಕೊಂಡುಬಿಡಬೇಕು. ಇದು ರಜೆಯಲ್ಲಿ ಮಾತ್ರವಲ್ಲ, ಎಲ್ಲ ಸಂದರ್ಭಗಳಲ್ಲಿಯೂ ನೀವು ಓದು ಮುಗಿಸಿ ವೃತ್ತಿಜೀವನ ಆರಂಭಿಸಿದ ಮೇಲೂ. ಯಶಸ್ಸು ಎಂಬುದು ಆಗ ಸುಲಭವೂ ಅರ್ಥಪೂರ್ಣವೂ ಆಗುತ್ತದೆ.

ಈಗ ಶಾಲೆ ಆರಂಭವಾದ ಮೇಲೆ ಅಲ್ಲಿ ತೋರಿಸಬೇಕಾದ ‘ಹೋಂ–ವರ್ಕ್‌’ ಸಿದ್ಧವಿದೆ. ಇದು ನಿಮಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ಇನ್ನು ಮುಂದಿನ ಯೋಜನೆ. ಒಂದರ್ಧ ದಿನ ಬಿಡುವು ಮಾಡಿಕೊಂಡು ಎಲ್ಲ ಆಕರ್ಷಣೆಗಳಿಂದ ದೂರವಾಗಿ ಕುಳಿತುಕೊಳ್ಳಿ. ಮೊಬೈಲ್ ಆಫ್ ಮಾಡಿದರೂ ನಡೆದೀತು. ಟಿವಿ/ಕಂಪ್ಯೂಟರ್‌ ಬೇಡ. ಒಂದು ಹಾಳೆ–ಪೆನ್ನು ಇಟ್ಟುಕೊಂಡು ಕುಳಿತು ನಿಧಾನವಾಗಿ ನೀವು ಬೆಳೆದುಬಂದ ದಾರಿಯನ್ನೇ ಕುರಿತು ಯೋಚನೆ ಮಾಡಿ. ನಿಮಗೆ ನೆನಪಿರುವ ತುಂಬ ಹಿಂದಿನ ನೆನಪಿನಿಂದ ಆರಂಭಿಸಿ. ವಿಶ್ಲೇಷಣೆ ಮಾಡುತ್ತಾ ಬನ್ನಿ. ಸಂತೋಷ, ಕಷ್ಟ, ನೋವು ಎಲ್ಲವನ್ನು ಕುರಿತು ಯೋಚನೆ ಮಾಡಿ. ಬರೆಯಬೇಕು ಎನಿಸಿದ್ದನ್ನು ಬರೆದಿಟ್ಟುಕೊಳ್ಳಿ. ಕೆಲವರಿಗೆ ಸಂತೋಷಕ್ಕಿಂತ ದುಃಖವೇ ಹೆಚ್ಚಿರಬಹುದು ಅಥವಾ ದುಃಖ ದೊಡ್ಡದಿರಬಹುದು. ಆದರೆ, ನೆನಪಿಡಿ ಇದೇ ಜೀವನ! ಅರ್ಥಮಾಡಿಕೊಳ್ಳಲು ಯತ್ನಿಸಿ. ಹಾಗೆ ತಿಳಿಯಿರಿ ನಮಗಿಂತಲೂ ಸಾವಿರ ಪಟ್ಟು, ಲಕ್ಷಪಟ್ಟು ಕಷ್ಟ ನೋವುಗಳನ್ನು ಅನುಭವಿಸಿದವರು ನಮ್ಮ ಸುತ್ತಮುತ್ತ ಇದ್ದಾರೆ. ನಮ್ಮ ದೇಶ/ಪ್ರಪಂಚದ ಇತಿಹಾಸವನ್ನು ಸೃಷ್ಟಿಸಿದ ಅನೇಕರು ಹೀಗೆ ನಾವು ಊಹಿಸಲೂ ಸಾಧ್ಯವಾಗದ ಕಷ್ಟಗಳನ್ನು ಅನುಭವಿಸಿ ಅದನ್ನೆ ಯಶಸ್ಸಿನ ದಾರಿ ಮಾಡಿಕೊಂಡವರು. ಅದೇ ನಮಗೆ ದಾರಿದೀಪ ಎಂದುಕೊಳ್ಳಿ. ಮನೆಯವರ ಕಷ್ಟ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ. ನಾನು ಮುಂದೆ ಓದಿ, ದುಡಿದು ಸರಿಪಡಿಸುತ್ತೇನೆಂದೂ ಮುಂದಿನ ಜೀವನ ಖಂಡಿತವಾಗಿ ಸೊಗಸಾಗಿರುತ್ತದೆ ಎಂದು ಹೇಳಿಕೊಳ್ಳಿ. ನಾನು ಗಣ್ಯವ್ಯಕ್ತಿ ಆಗಿಯೇ ಆಗುತ್ತೇನೆಂದು ಪದೇ ಪದೇ ಹೇಳಿಕೊಳ್ಳಿ. ಗುರಿಯನ್ನು ಕುರಿತು ಯೋಚಿಸಿ. ಈಗ ನಿಮ್ಮ ಮುಂದಿನ ಜೀವನವನ್ನು ಕುರಿತು ತುಸು ಯೋಚಿಸಿ! ನಿಮಗೇ ಆಶ್ಚರ್ಯವಾಗುವಂತೆ ಒಂದು ಭಾವನೆ ಬಂದುಬಿಟ್ಟಿರುತ್ತದೆ. ಗಾಂಭೀರ್ಯ ಬಂದಿರುತ್ತದೆ. ಇದು ಮೊದಲ ಹಂತ. ಸಾಧನೆಯ ಹಾದಿಯಲ್ಲಿದ್ದೇನೆ ಎಂದು ನಿಮಗೆ ನೀವೇ ಭರವಸೆ ಕೊಟ್ಟುಕೊಳ್ಳಿ. ಈಗ ಕಳೆದ ಅರ್ಧವರ್ಷವನ್ನು ಕುರಿತು ಯೋಚಿಸಿ. ಏನು ಮಾಡಲು ಸಾಧ್ಯವಾಯಿತು, ಏನು ಆಗಲಿಲ್ಲ ಪಟ್ಟಿಮಾಡಿ. ಆಗದ್ದಕ್ಕೆ ಕಾರಣವನ್ನು ಯೋಚಿಸಿ; ಸರಿಪಡಿಸಲು ಸಾಧ್ಯವೇ ನೋಡಿ. ಅದಕ್ಕೆ ಮುಂದೆ ನಿಮ್ಮ ಪೋಷಕರ ಅಥವಾ ಶಿಕ್ಷಕರ ಸಹಾಯವನ್ನು ಪಡೆಯಬಹುದು. ಕೆಲವರು ನಾನು ಚಿಕ್ಕವನಾಗಿದ್ದಾಗ ತಪ್ಪುಮಾಡಿದೆ ಎಂದು ಹಲುಬುತ್ತಾರೆ. ಅದನ್ನು ‘ಆಗ ಚಿಕ್ಕವನಾಗಿದ್ದೆ, ಆದ್ದರಿಂದ ತಪ್ಪುಮಾಡಿದೆ’ ಹೀಗೆ ತೆಗೆದುಕೊಳ್ಳಿ. ಆದರೆ, ಆಗಿಹೋದ ಯಾವುದರ ಬಗ್ಗೆಯೂ ಕಾಲವ್ಯರ್ಥಮಾಡುವುದು ಬೇಡವೇ ಬೇಡ.

ಇನ್ನು ರಜೆಯಲ್ಲಿ ಅವಶ್ಯ ಮಾಡಬೇಕಾದ್ದು ನಮ್ಮ ಕ್ಷಮತೆಯ ಪರೀಕ್ಷೆ. ಅಂದರೆ ನಾವೆಷ್ಟು ಕೆಲಸ ಮಾಡಬಲ್ಲೆವು ಎಂಬುದನ್ನು ಪರೀಕ್ಷಿಸುವುದು. ಪ್ರತಿದಿನವೂ ನಮಗೆ 86,400 ಸೆಕೆಂಡುಗಳಷ್ಟು ಸಮಯ ದೊರೆಯುತ್ತದೆ. ಯಾರಿಗೂ ಹೆಚ್ಚಿಲ್ಲ, ಯಾರಿಗೂ ಕಡಿಮೆಯಿಲ್ಲ! ಬಳಸಿದರೂ ಅಷ್ಟೆ, ಬಳಸದಿದ್ದರೂ ಅಷ್ಟೆ! ಈ ಕುರಿತು ಯೋಚಿಸಿ ಅದರ ಸದುಪಯೋಗಕ್ಕೆ ವೇಳಾಪಟ್ಟಿ ಸಿದ್ಧಮಾಡಿ. ಅದು ನಿಮ್ಮಿಂದ ಸಾಧ್ಯವಾಗುವಂತಿರಲಿ. (ಇಡೀ ರಾತ್ರಿ ಓದುತ್ತೇನೆ ಇಂಥವು ಬೇಡ). ಈ ವೇಳಾಪಟ್ಟಿಯಲ್ಲಿ ಪಠ್ಯ–ಪಠ್ಯೇತರ ಚಟುವಟಿಕೆಗಳನ್ನು ಹೊಂದಿಸಿ.

ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಓದುವುದನ್ನು ಅಭ್ಯಾಸ ಮಾಡಲು ಇದು ಸಕಾಲ. ಆದರೆ, ಒಂದು ಗಂಟೆಗೊಮ್ಮೆ ಎದ್ದು ಕಾಲಾಡಿಸಿ ಬನ್ನಿ.

* ವೇಳಾಪಟ್ಟಿಯಲ್ಲಿ ನಿಗದಿ ಪಡಿಸಿದಷ್ಟು ಸಮಯವನ್ನು ಹೊರಗೆ ಕಳೆಯಿರಿ.

* ಮನೆಯ ಸಮೀಪದ ಗ್ರಂಥಾಲಯಕ್ಕೆ ಭೇಟಿಕೊಟ್ಟು ಎಷ್ಟು ವಿಷಯಗಳನ್ನು ಕುರಿತಂತೆ ಎಷ್ಟೆಲ್ಲ ಪುಸ್ತಕಗಳಿವೆ ಎಂದು ನೋಡಿಕೊಂಡು ಬನ್ನಿ. ನಿಮ್ಮ ಆಸಕ್ತಿಯ ಕ್ಷೇತ್ರದ ಯಾವ ಯಾವ ಪುಸ್ತಕಗಳಿವೆ ನೋಡಿ. ಗ್ರಂಥಪಾಲಕರನ್ನು ಪರಿಚಯ ಮಾಡಿಕೊಂಡು ಮಾತನಾಡಿ.

* ಸಮಾನತೆ, ಪ್ರೀತಿ, ಸಹಮಾನವರಿಗೆ ಗೌರವ, ಮಾನವಹಕ್ಕುಗಳು, ಸಂಸ್ಕೃತಿ, ಸ್ತ್ರೀಯರನ್ನು, ಹಿರಿಯರನ್ನು ಗೌರವಿಸುವುದು, ಹಿರಿಯ ನಾಗರಿಕರ ಸಮಸ್ಯೆ – ಇವುಗಳನ್ನು ಕುರಿತು ಈ ರಜೆಯಲ್ಲಿ ಯೋಚಿಸಿ. ಗೆಳೆಯರೊಂದಿಗೆ ಚರ್ಚಿಸಿ ನಿಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಿ. ಮಹಾಪುರುಷರಚಿಂತನೆಗಳನ್ನು ಮೂಲದಲ್ಲಿಯೇ ಓದಿ.

* ಯಾವುದಾದರು ಸಂಗ್ರಹಾಲಯವಿದ್ದರೆ ಅವಶ್ಯ ಹೋಗಿಬನ್ನಿ. ಆದರೆ ನೋಡಿದ್ದರ ಕುರಿತಾಗಿ ಟಿಪ್ಪಣಿ ಬರೆಯುವುದು ಬಹಳ ಮುಖ್ಯ. ಇದರಿಂದ ನಿಮ್ಮ ಭಾಷಾ ಸಾಮರ್ಥ್ಯವೂ ಹೆಚ್ಚುತ್ತದೆ. ಅಪರೋಕ್ಷವಾಗಿ ನಿಮ್ಮ ಅಂಕಗಳಿಕೆಯೂ ಹೆಚ್ಚುತ್ತದೆ.

* ನಿಮ್ಮ ಗೆಳೆಯರಲ್ಲಿ ಗೊತ್ತಿರುವ ವಿಷಯವನ್ನು ಗೊತ್ತಿಲ್ಲದವರಿಗೆ ಹೇಳಿಕೊಡುವ ವ್ಯವಸ್ಥೆ ಮಾಡಿಕೊಳ್ಳಿ.

* ಗುಂಪಿನಲ್ಲಿ ಪುಸ್ತಕಗಳನ್ನು ಓದುವ ಕಾರ್ಯಕ್ರಮ ಹಾಕಿಕೊಳ್ಳಿ.

* ರಜೆಯಲ್ಲಿ ಹತ್ತಿರದ ಅಥವಾ ದೂರದ ಊರಿಗೆ ಪ್ರವಾಸ ಹೋಗಿಬರುವುದು ಸಹಜ. ಆದರೆ, ಈ ಬಾರಿ ಆ ಊರುಗಳನ್ನು ಕುರಿತಾಗಿ ಚೆನ್ನಾಗಿ ಓದಿಕೊಂಡು ಹೋಗಿ. ಅಲ್ಲಿನ ನೋಡುವುದನ್ನು ನಿಮ್ಮ ಓದಿನೊಂದಿಗೆ ಸ್ಮರಿಸಿಕೊಳ್ಳಿ.

* ಇದು ಹಬ್ಬದ ರಜೆಯಾಗಿರುವುದು ವಿಶೇಷ. ನಿಮ್ಮ ಮನೆಗಳಲ್ಲಿ, ಊರಿನಲ್ಲಿ ಈ ಹಬ್ಬದ ವಿಶೇಷತೆಗಳೇನು ಎಂಬುದನ್ನು ಕೇಳಿ ತಿಳಿದುಕೊಂಡು ಟಿಪ್ಪಣಿ ಬರೆದು, ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

* ದೈಹಿಕ ಚಟುವಟಿಕೆಗೆ ನಮ್ಮ ದೇಶದ ಬಹುತೇಕ ಶಾಲೆಗಳಲ್ಲಿ ಕೊನೆಯ ಆದ್ಯತೆ ಅಥವಾ ಆಸ್ಪದವೇ ಇರುವುದಿಲ್ಲ. ಹಾಗಾಗಿ, ಈ ರಜೆಯಲ್ಲಿ ದೂರದ ಊರಿಗೆ ಹೋದಾದರೂ ಬೆಟ್ಟಗುಡ್ಡಗಳನ್ನು ಹತ್ತುವುದು, ಚಾರಣ – ಇಂತಹವನ್ನು ಮಾಡಿ. ಆದರೆ ಹಿರಿಯರ ಮಾರ್ಗದರ್ಶನ ಸದಾ ಇರಲಿ.

ಈ ರಜೆ ಇಪ್ಪತ್ತು ದಿನಗಳದ್ದಾದರೂ ತುಂಬ ಕಡಿಮೆಯೇನೂ ಅಲ್ಲ; ಹಾಗೆ ದೊಡ್ಡ ಯೋಜನೆ ಹಾಕಿಕೊಳ್ಳುವಷ್ಟು ದೊಡ್ಡದೂ ಅಲ್ಲ. ಅದರ ಸದುಪಯೋಗವಾಗಬೇಕು. ಅಂದರೆ ನಮ್ಮ ಅಭಿವೃದ್ಧಿಗೆ ಇದು ಪೂರಕವಾಗಬೇಕು. ಹಾಗೆ ಬಳಸಿಕೊಳ್ಳಿ. ಸಮಯವಿರುವುದರಿಂದ ವಿಶ್ರಾಂತಿಗೂ ಆದ್ಯತೆ ನೀಡಿ. ನಿಮಗೆ ಆರೋಗ್ಯದ ಸಮಸ್ಯೆಗಳಿದ್ದರೆ ಕುಟುಂಬವೈದ್ಯರನ್ನು ಪೋಷಕರೊಡನೆ ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ.

ಫೇಸ್‍ಬುಕ್‍, ವಾಟ್ಸ್‌ಆ್ಯಪ್‌ಗಳು
ಬೇರೆಯವರು ಬಿಡಿ, ನೀವು ಯಾಕೆಫೇಸ್‍ಬುಕ್‍, ವಾಟ್ಸ್‌ಆ್ಯಪ್‌ಗಳನ್ನು ಬಳಸುತ್ತಿದ್ದೀರಿ ಎಂಬ ಪ್ರಶ್ನೆ ಹಾಕಿಕೊಂಡು ಸರಿಯಾದ ಉತ್ತರವನ್ನು ಕಂಡುಕೊಳ್ಳಿ. ಸಮಯ ವ್ಯರ್ಥವಾಗುವ ಪೋಸ್ಟುಗಳು ಬೇಡ. ನಿಮಗೆ ತಿಳಿದಿರುವ ವಿಷಯ, ಅದು ನಿಮ್ಮ ಪಾಠದ್ದಾದರೂ ತೊಂದರೆಯಿಲ್ಲ, ಪೋಸ್ಟ್ ಮಾಡಿ. ನಿಮ್ಮ ಆಸಕ್ತಿಯಿರುವ ವಿಜ್ಞಾನ, ಆಟೋಟ ಇಂತಹವನ್ನು ಹಾಕಿ. ಫೇಸ್‍ಬುಕ್‌ನಲ್ಲಿ ಬರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಇವುಗಳಿಂದ ಕಲಿಯುವುದು ಸಾಕಷ್ಟಿರುತ್ತದೆ. ಗೆಳೆಯರೊಂದಿಗೆ ಚರ್ಚಿಸಿ. ಸಾಮಾಜಿಕ ಜಾಲತಾಣವನ್ನು ಜಾಣತನದಿಂದ, ಸರಿಯಾಗಿ ಬಳಸಿಕೊಂಡರೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT