ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ತಟದ ದೇಗುಲ ಸಮುಚ್ಚಯ ಮಹಾಬಲಿಪುರಂ

ಗುರುಶಂಕರ್‌ ಕೆ.ಪಿ
Published 3 ಜನವರಿ 2024, 23:49 IST
Last Updated 3 ಜನವರಿ 2024, 23:49 IST
ಅಕ್ಷರ ಗಾತ್ರ

ಮಹಾಬಲಿಪುರಂ ತಮಿಳುನಾಡಿನ ಬಂದರು ನಗರಿ, ಅದ್ಭುತ ಸ್ಮಾರಕ ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಏಳನೇ ಶತಮಾನದಲ್ಲಿ ತಮಿಳುನಾಡನ್ನು ಆಳಿದ ಪಲ್ಲವರ ಕಾಲದಲ್ಲಿ ಮಹಾಬಲಿಪುರಂ ವಾಸ್ತುಶಿಲ್ಪವು ಉನ್ನತಿಯನ್ನು ಕಂಡಿತ್ತು. ಇಲ್ಲಿನ ದೇವಾಲಯಗಳು ಮತ್ತು ಸ್ಮಾರಕಗಳು ಯುನೆಸ್ಕೊ ಸಂಸ್ಥೆಯ ವಿಶ್ವ ಪಾರಂಪರಿಕ ತಾಣ ಆಗಿವೆ.

ಮಹಾಬಲಿಪುರಂ ವಾಸ್ತುಶಿಲ್ಪದ ವಿಧಗಳು

ರಥ ದೇವಾಲಯಗಳು ಅಥವಾ ಪಂಚರಥ : ಈ ದೇವಾಲಯಗಳನ್ನು ಪಾಂಡವರ ರಥ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದ ಅತ್ಯಂತ ಹಳೆಯ ದೇವಾಲಯಗಳಾಗಿದ್ದು ಇವುಗಳನ್ನು ಧರ್ಮರಾಜ ರಥ, ಭೀಮರಥ, ಅರ್ಜುನ ರಥ, ನಕುಲ ಮತ್ತು ಸಹದೇವ ರಥ ಮತ್ತು ದ್ರೌಪದಿ ರಥ ಎಂದು ಹೆಸರಿಸಲಾಗಿದೆ. ಧರ್ಮರಾಜ ರಥವು ಅತ್ಯಂತ ದೊಡ್ಡ ದೇವಾಲಯವಾಗಿದೆ.

ಬಂಡೆಗಲ್ಲಿನಿಂದ ನಿರ್ಮಿತ ದೇವಾಲಯಗಳು: ಈ ಸ್ವರೂಪದ ದೇವಾಲಯಗಳಲ್ಲಿ ವರಾಹ ದೇವಾಲಯ, ಕೃಷ್ಣ ದೇವಾಲಯ, ಪಂಚಪಾಂಡವ ದೇವಾಲಯ ಮತ್ತು ಮಹಿಷಾಸುರ ಮರ್ದಿನಿ ಮಂಟಪ ಪ್ರಮುಖವಾದವು.  ಮಹಿಷಾಸುರ ಮರ್ದಿನಿ ಮಂಟಪದಲ್ಲಿ ತಾಯಿ ದುರ್ಗೆ ಮಹಿಷಾಸುರನನ್ನು ವಧೆ ಮಾಡುತ್ತಿರುವ ಭಂಗಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ತೆರೆದ ಗುಹಾಂತರ ಶಿಲ್ಪಗಳು : ದೊಡ್ಡ ಬಂಡೆಗಳನ್ನು ಬಳಸಿ ಶಿಲ್ಪಗಳನ್ನು ಕೆತ್ತಲಾಗಿದೆ. ಭಗೀರಥನು ತಪಸ್ಸು ಮಾಡುತ್ತಿರುವಂತೆ ಹಾಗೂ ಗಂಗಾನದಿಯು ಸ್ವರ್ಗದಿಂದ ಭೂಮಿಗೆ ಧುಮುಕುತ್ತಿರುವ ಶಿಲ್ಪವನ್ನು ಕೆತ್ತಲಾಗಿದೆ.

ದೇವಾಲಯಗಳ ಸಂಕೀರ್ಣ: ದೇವಾಲಯಗಳ ಸಂಕೀರ್ಣದಲ್ಲಿ ಎರಡು ಸಣ್ಣ ದೇವಾಲಯಗಳನ್ನು ಮತ್ತು ಒಂದು ದೊಡ್ಡ ದೇವಾಲಯವನ್ನು ನಿರ್ಮಿಸಲಾಗಿದೆ. ಗೋಡೆಯ ಮೇಲೆ ನಂದಿಯ ಶಿಲ್ಪವಿದ್ದು, ಈ ಮೂರು ದೇವಾಲಯಗಳು ಶಿವನಿಗೆ ಅರ್ಪಿತವಾದ ದೇವಾಲಯಗಳಾಗಿವೆ.

ಚೋಳರ ಕಾಲದ ವಾಸ್ತುಶಿಲ್ಪ: ಚೋಳರ ಆಳ್ವಿಕೆಯಲ್ಲಿ ನೂರಾರು ದೇವಾಲಯಗಳನ್ನು ದಕ್ಷಿಣ ಭಾರತದಲ್ಲಿ ನಿರ್ಮಿಸಲಾಯಿತು. ಪಲ್ಲವರ ಆಳ್ವಿಕೆಯ ಸಂದರ್ಭದ ವಾಸ್ತುಶಿಲ್ಪಕ್ಕೆ ಹೋಲಿಕೆ ಇದ್ದರೂ, ಇದನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪ ಎಂದು ಕರೆಯಬಹುದು.

ದ್ರಾವಿಡ ಶೈಲಿಯ ಗುಣಲಕ್ಷಣಗಳು:  ದೇವಾಲಯದ ಸುತ್ತ ಎತ್ತರದ ಗೋಡೆಗಳನ್ನು ನಿರ್ಮಿಸಲಾಗಿರುತ್ತದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಎತ್ತರದ ಗೋಪುರಗಳಿರುತ್ತವೆ. ನಾಡ ಶೈಲಿಯ ದೇವಾಲಯಗಳಲ್ಲಿಯೂ ‘ಪಂಚಾಯತನ ಶೈಲಿ’ ಕಾಣಬಹುದು. ಮಧ್ಯಭಾಗದಲ್ಲಿ ಪ್ರಮುಖ ದೇವರ ದೇವಾಲಯ ಮತ್ತು ಸುತ್ತಲಿನ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಣ್ಣ ದೇವಾಲಯಗಳಿರುತ್ತವೆ.

ಗೋಪುರಗಳು ಪಿರಮಿಡ್ ಆಕಾರದಲ್ಲಿದ್ದು , ಇವುಗಳನ್ನು ವಿಮಾನ ಎಂದು ಕರೆಯಲಾಗುತ್ತದೆ. ಶಿಖರಗಳು ಅಷ್ಟ ಭುಜ ಆಕಾರದಲ್ಲಿರುತ್ತವೆ. ನಾಗರ ಶೈಲಿಯ ದೇವಾಲಯಗಳ ಕಳಶವನ್ನು ಹೋಲುವಂತಿರುತ್ತದೆ.

ಪ್ರಮುಖ ದೇವಾಲಯದ ಮೇಲೆ ವಿಮಾನವನ್ನು ನಿರ್ಮಿಸಿದ್ದು, ನಾಲ್ಕು ದಿಕ್ಕುಗಳಲ್ಲಿ ಉಪದೇವಾಲಯಗಳಿರುತ್ತವೆ. ಗರ್ಭಗೃಹ ಮತ್ತು ಸಭಾಂಗಣಗಳಿಗೆ ಹಜಾರದ ಸುರಂಗ ಮಾರ್ಗದಿಂದ ಸಂಪರ್ಕ ಕಲ್ಪಿಸಲಾಗಿದೆ. ಈ ಮಾರ್ಗವನ್ನು ಅಂತರಾಳ ಎಂದು ಕರೆಯಲಾಗುತ್ತದೆ.

ಪ್ರತಿಯೊಂದು ದೇವಾಲಯದ ಪ್ರವೇಶ ದ್ವಾರದಲ್ಲಿ ದ್ವಾರಪಾಲಕರು, ಮಿಥುನ ಮತ್ತು ಯಕ್ಷ ದೇವರ ಶಿಲ್ಪಗಳನ್ನು ಕಾಣಬಹುದು. ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ಮಾತ್ರ ಕಂಡುಬರುವ ಮತ್ತೊಂದು ಪ್ರಮುಖ ಅಂಶವೆಂದರೆ ದೇವಾಲಯದ ಒಳಗೆ ನೀರಿನ ತೊಟ್ಟಿಯನ್ನು ಕಾಣಬಹುದು.

ದ್ರಾವಿಡ ವಾಸ್ತುಶಿಲ್ಪ ಶೈಲಿಯ ದೇಗುಲಗಳು

ಒಂದನೇ ರಾಜರಾಜ ನಿರ್ಮಿಸಿದ ತಂಜಾವೂರಿನ ಬಳಿ ಇರುವಂತಹ ಬೃಹದೇಶ್ವರ ದೇವಾಲಯ ಹಾಗೂ ಒಂದನೇ ರಾಜೇಂದ್ರ ನಿರ್ಮಿಸಿದಂತಹ ಗಂಗೈಕೊಂಡ ಚೋಳಪುರಂ ದೇವಾಲಯ.

ಇತರೆ ವಾಸ್ತು ಶಿಲ್ಪ ಶೈಲಿಗಳು

ನಾಯಕ ವಾಸ್ತುಶಿಲ್ಪ ಶೈಲಿ: ಈ ಸ್ವರೂಪದ ವಾಸ್ತುಶಿಲ್ಪವನ್ನು ಮಧುರೈ ವಾಸ್ತುಶಿಲ್ಪ ಶೈಲಿ ಎಂದು ಕೂಡ ಕರೆಯಲಾಗುತ್ತದೆ. ನಾಯಕ ವಾಸ್ತುಶಿಲ್ಪ ಶೈಲಿಯು 16 ನೇ ಶತಮಾನದಿಂದ 18 ನೇ ಶತಮಾನದ ಅವಧಿಯಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿತು. ನಾಯಕ ವಾಸ್ತುಶಿಲ್ಪ ಶೈಲಿಯು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೋಲುತ್ತಿದ್ದರೂ ಇಸ್ಲಾಮಿಕ್ ಪ್ರಭಾವ ಕಾಣುತ್ತದೆ.

ಇದರ ಪ್ರಮುಖ ಗುಣಲಕ್ಷಣಗಳು: ಈ ದೇವಾಲಯಗಳಲ್ಲಿ ಅತಿದೊಡ್ಡ ಗೋಪುರಗಳನ್ನು ಕಾಣಬಹುದು. ಮಧುರೈ ಮೀನಾಕ್ಷಿ ದೇವಾಲಯ ಇದಕ್ಕೆ ಪ್ರಸಿದ್ಧಿಯಾಗಿದೆ.

ವೇಸರ ವಾಸ್ತುಶಿಲ್ಪ ಶೈಲಿ : ವೇಸರ ವಾಸ್ತುಶಿಲ್ಪ ಶೈಲಿಯನ್ನು ಕರ್ನಾಟಕದ ವಾಸ್ತುಶಿಲ್ಪ ಶೈಲಿ ಎಂದೂ ಕರೆಯಬಹುದು. ಏಳನೇ ಶತಮಾನದ ಮಧ್ಯಭಾಗದಲ್ಲಿ ಚಾಲುಕ್ಯರ ಆಳ್ವಿಕೆಯ ಸಂದರ್ಭದಲ್ಲಿ ನಾಗರ ವಾಸ್ತುಶಿಲ್ಪ ಶೈಲಿ ಹಾಗೂ ದ್ರಾವಿಡ ವಾಸ್ತುಶಿಲ್ಪ ಶೈಲಿಯ ಮಿಶ್ರ ಅಂಶಗಳೊಂದಿಗೆ ವೇಸರ ವಾಸ್ತುಶಿಲ್ಪ ಶೈಲಿ ಅಭಿವೃದ್ಧಿಯಾಗಿದೆ.

ಈ ಶೈಲಿಗೆ ಹೆಚ್ಚು ಕೊಡುಗೆ ನೀಡಿದ ಸಾಮ್ರಾಜ್ಯಗಳು: ‌

ಬಾದಾಮಿ ಮತ್ತು ಕಲ್ಯಾಣಿಯ ಚಾಲುಕ್ಯ ವಂಶಸ್ಥರು

ರಾಷ್ಟ್ರಕೂಟರು - ಎಲ್ಲೋರಾದ ಕೈಲಾಸನಾಥ ದೇವಾಲಯ.

ಹೊಯ್ಸಳರು - ಹಳೇಬೀಡು ಮತ್ತು ಬೇಲೂರು ದೇವಾಲಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT