ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ನಾಳೆಯಿಂದ (ಆಗಸ್ಟ್ 13) ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಅಗತ್ಯ ಸೌಲಭ್ಯಗಳಿದ್ದರೆ ಆನ್ಲೈನ್ ಮೂಲಕವೇ ದಾಖಲಾತಿ ಪ್ರಕ್ರಿಯೆ ನಿರ್ವಹಿಸಬೇಕು. ಅಂಥ ವ್ಯವಸ್ಥೆ ಇಲ್ಲದ ಕಾಲೇಜುಗಳು ಅರ್ಜಿ ವಿತರಣೆ ಪ್ರಕ್ರಿಯೆಯನ್ನು ಕೋವಿಡ್-19 ತಡೆ ಸೂಚನೆಗಳಿಗೆ ಅನುಗುಣವಾಗಿ ನಿರ್ವಹಿಸಬೇಕು ಎಂದು ಸುತ್ತೋಲೆ ತಿಳಿಸಿದೆ.
ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಗುಂಪು ಸೇರಲು ಅವಕಾಶ ಕೊಡಬಾರದು. ಆಯ್ಕೆ ಪಟ್ಟಿ ಪ್ರಕಟಿಸಿದ ನಂತರವೂ ವಿದ್ಯಾರ್ಥಿಗಳ ದಾಖಲಾತಿಗೆ ತಂಡಗಳನ್ನು ವಿಂಗಡಿಸಬೇಕು ಎಂದು ಹೇಳಲಾಗಿದೆ.
ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು 2020-21ರ ಸಾಲಿಗೆ ಯಾವುದೇ ಶುಲ್ಕ ಹೆಚ್ಚಿಸುವಂತಿಲ್ಲ. ಕಳೆದ ಸಾಲಿಗಿಂತ ಕಡಿಮೆ ಶುಲ್ಕ ಪಡೆಯಲು ಆಡಳಿತ ಮಂಡಳಿಗಳಿಗೆ ಸ್ವಾತಂತ್ರ್ಯವಿದೆ ಎಂದು ನಿರ್ದೇಶಕರು ಹೇಳಿದ್ದಾರೆ.