ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಪರ್ ಎಂಜಿನಿಯರ್!

Last Updated 29 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬಹಳಷ್ಟು ವಿದ್ಯಾರ್ಥಿಗಳಿಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಆದರೆ ಇಲ್ಲೊಬ್ಬರು ಗಣಿತ ವಿಷಯದಲ್ಲಿನ ಪೈಥಾಗೊರಸ್ ಪ್ರಮೇಯವನ್ನು ಬಣ್ಣದ ಕಾಗದದ ದೋಣಿಯೊಂದಿಗೆ ಕಲಿಸುತ್ತಾರೆ. ಮಡಿಸಿದ ಕಾಗದದ ತುಂಡೊಂದರಲ್ಲಿಯೇ ಬೃಹತ್ ಭೂಮಿಯ ಗುರುತ್ವಾಕರ್ಷಣೆ ನಿಯಮವನ್ನು ಮನದಟ್ಟಾಗುವಂತೆ ವಿವರಿಸುತ್ತಾರೆ. ಇದು ಅರುಣ್ ದೇಸಾಯಿಯವರ ವಿನೂತನ ಬೋಧನಾ ಶೈಲಿ!

ದೇಶದ ಏಕೈಕ ಪೇಪರ್ ಎಂಜಿನಿಯರ್ ಎಂದೇ ಖ್ಯಾತಿ ಗಳಿಸಿದ್ದಾರೆ ಅರುಣ್ ದೇಸಾಯಿ. ಇವರು ಬೇರೆ ಶಿಕ್ಷಕರಿಂದ ಭಿನ್ನವಾಗಿ ಕಾಣುವುದು ಅವರ ಭೋದನಾ ಶೈಲಿಯಿಂದ. ತರಗತಿಗೆ ಹೋದಾಗ ಕಪ್ಪು ಹಲಗೆಯ ಮೇಲೆ ಚಾಕ್ ಪೀಸ್ ನಿಂದ ಬರೆಯುವುದಿಲ್ಲ ಬದಲಾಗಿ ಎಲ್ಲಾ ಮಕ್ಕಳಿಗೆ ವರ್ಕ್ ಮಾಡಲು ಬಣ್ಣ ಬಣ್ಣದ ಕಾಗದಗಳನ್ನು ನೀಡುತ್ತಾರೆ. ಪ್ರತೀ ವಿದ್ಯಾರ್ಥಿಗೆ ಅಂಟು ,ಕತ್ತರಿ ಮೊದಲಾದುವುಗಳ ಸಹಾಯವಿಲ್ಲದೆ ಒಂದು ಮಾದರಿ(ಮಾಡೆಲ್) ತಯಾರಿಸುವುದನ್ನು ತೋರಿಸಿಕೊಡುತ್ತಾರೆ. ಚಟುವಟಿಕೆ ಮುಗಿದ ನಂತರ ದೇಸಾಯಿಯವರು ಕಾಗದವನ್ನು ಮಡಿಚಿ ತಯಾರಿಸಿದ ಮಾಡೆಲ್‍ನ ಮೂಲಕವೇ ಥಿಯರಿಯನ್ನು ವಿವರಿಸುತ್ತಾರೆ. ವಿಶೇಷವೇನೆಂದರೆ ಆ ಸಂದರ್ಭದಲ್ಲಿ ಅವರು ಗಣಿತವನ್ನು ಕಲಿಸುತ್ತಿದ್ದೇನೆ ಎನ್ನುವ ವಿಷಯವನ್ನೇ ಮಕ್ಕಳಿಂದ ಮರೆಮಾಚಿಬಿಡುತ್ತಾರೆ! ಗಣಿತ ಹಾಗೂ ತಾವು ಕರಗತ ಮಾಡಿಕೊಂಡಿರುವ ಕಾಗದದ ಕರಕುಶಲತೆಯ ಜ್ಞಾನವನ್ನು ಸಂಯೋಜಿಸಿ ರೇಖಾಗಣಿತ ಮತ್ತು ವಿಜ್ಞಾನವನ್ನು ಬಹಳ ವಿಶಿಷ್ಟ ಶೈಲಿಯಲ್ಲಿ ಕಲಿಸುತ್ತಾರೆ.

ಅರುಣ್ ದೇಸಾಯಿಯವರು ಪೇಪರ್ ಮಾಡೆಲ್‍ಗಳೊಂದಿಗೆ ಕಲಿಸಿಕೊಡುವ ವಿಧಾನವು ಮಕ್ಕಳ ಮನೋ ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಅವರ ತಪ್ಪುಗಳನ್ನು ತ್ವರಿತವಾಗಿ ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವಿದ್ಯಾರ್ಥಿಯು ವಿಮಾನವನ್ನು ತಯಾರಿಸಿಟ್ಟು ಅಕಸ್ಮಾತ್ ಆಗಿ ಅದು ಹಾರಾಟ ನಡೆಸದಿದ್ದರೆ ತನ್ನ ಲೆಕ್ಕಾಚಾರಗಳು ಎಲ್ಲೋ ತಪ್ಪಾಗಿವೆ ಎಂದು ಅರಿತುಕೊಳ್ಳುತ್ತಾನೆ ಮತ್ತು ಅದನ್ನು ಸರಿಪಡಿಸಲು ಯತ್ನಿಸುತ್ತಾನೆ. ಈ ವಿಧಾನಗಳು ಬಹಳ ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿಯು ಹೆಚ್ಚಿನ ಅಂಕ ಗಳಿಸಲು ಸಹಾಯ ಮಾಡುತ್ತವೆ.

ಹುಬ್ಬಳ್ಳಿಯಲ್ಲಿ ಜನಿಸಿದ ಅರುಣ್ ದೇಸಾಯಿವರು ಗಣಿತ ವಿಷಯದಲ್ಲಿ ಎಂ.ಎಸ್ಸಿ ಮಾಡಿದ್ದಾರೆ. ಐದು ವರ್ಷದ ಬಾಲಕನಾಗಿದ್ದಾಗಲೇ ಇವರಿಗೆ ಕಾಗದದಲ್ಲಿ ಕರಕುಶಲತೆ(ಪೇಪರ್ ಕ್ರಾಫ್ಟ್)ಯನ್ನು ಮಾಡುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಸದ್ಯ ನಗರದ ಜೆ.ಪಿ ನಗರದಲ್ಲಿ ಚಿಟ್ಟೆ ಫೌಂಡೇಷನ್‌ ನಡೆಸುತ್ತಿದ್ದಾರೆ.

ಪದವಿ ಪಡೆದುಕೊಂಡ ನಂತರ ಅವರು ವೈದ್ಯಕೀಯ ಕಂಪನಿಯಲ್ಲಿ ಪ್ರಾದೇಶಿಕ ಮಾರಾಟ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದರು.ಆದರೆ ಪೇಪರ್ ಕ್ರಾಫ್ಟ್ ಕೆಲಸದತ್ತಲೇ ಅವರ ಚಿತ್ತನೆಟ್ಟಿದ್ದರಿಂದ ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಪೇಪರ್ ಕ್ರಾಫ್ಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ದೇಸಾಯಿಯವರ ಕಾಗದದ ಕಲಾಕೃತಿ ‘ದಿ ರೂಸ್ಟರ್’ ಅವರಿಗೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿದೆ ಅಷ್ಟೇ ಅಲ್ಲ ನ್ಯೂಯಾರ್ಕ್ ನಗರದ ಮ್ಯೂಸಿಯಂ ಆಫ್ ಮಾರ್ಡನ್ ಆರ್ಟ್‌ನಲ್ಲಿ ಶಾಶ್ವತ ಪ್ರದರ್ಶನದಲ್ಲಿದೆ. ಇವರ ಬಹಳಷ್ಟು ಕಲಾಕೃತಿಗಳು ತೈವಾನ್, ಜಪಾನ್, ಬ್ಯಾಂಕಾಂಗ್, ಹಾಂಗ್‍ಕಾಂಗ್, ಕತಾರ್ ಮೊದಲಾದ ದೇಶಗಳಲ್ಲಿ ಪ್ರದರ್ಶನಗೊಂಡಿವೆ.

***

ಬಣ್ಣ ಮತ್ತು ಕರಕುಶಲ ಕೆಲಸದ ಬಗ್ಗೆ ಇರುವ ಅಭಿರುಚಿಯು ನನಗೆ ವಿಷಯಗಳನ್ನು ಸರಳವಾಗಿ ಕಲಿಸಲು ಸಹಾಯಕವಾಗಿವೆ ಈ ತರಹದ ಕಲಿಕಾ ವಿಧಾನಗಳು ಮಕ್ಕಳ ಜ್ಞಾನಾರ್ಜನೆಗೆ ಅತ್ಯುತ್ತಮ ಅಡಿಪಾಯವನ್ನು ಹಾಕುತ್ತವೆ. ಕಲಿತಿದ್ದನ್ನು ದೀರ್ಘಾವಧಿವರೆಗೆ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತವೆ.

ಅರುಣ್‌ ದೇಸಾಯಿ

ಅರುಣ್‌ ಸಂಪರ್ಕಕ್ಕೆ– 98458 51800

ವಿದ್ಯಾ ವಿ. ಹಾಲಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT