ಮಹಾರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಉಸ್ಮಾನಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಏರಿಕೆಯಾಗಿದೆ. ಶಿವಸೇನಾ ಉದ್ಧವ್ ಠಾಕ್ರೆ ಬಣವು ಓಂಪ್ರಕಾಶ್ ರಾಜೆ ನಿಂಬಾಳ್ಕರ್ ಅವರನ್ನು ಅಭ್ಯರ್ಥಿಯಾಗಿಸಿದರೆ, ಎನ್ಸಿಪಿ ಅಜಿತ್ ಪವಾರ್ ಬಣವು ಅರ್ಚನಾ ಪಾಟೀಲ್ ಅವರನ್ನು ಅಖಾಡಕ್ಕಿಳಿಸಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಆಘಾಡಿ ಪಕ್ಷವು ಭಾವು ಸಾಹೇಬ್ ಅಂಧಾಲ್ಕರ್ ಅವರನ್ನು ಕಣಕ್ಕಿಳಿಸಿದೆ. ಎಐಎಂಐಎಂ ಕೂಡ ಸಿದ್ದೀಕ್ ಇಬ್ರಾಹಿಂ ಅವರನ್ನು ಅಭ್ಯರ್ಥಿಯಾಗಿಸಿದೆ.
2019ರ ಚುನಾವಣೆಯಲ್ಲಿ ಶಿವಸೇನಾದಿಂದ ಸ್ಪರ್ಧಿಸಿದ್ದ ಓಂಪ್ರಕಾಶ್ ರಾಜೆ ಅವರು, 1,27,566 ಮತಗಳ ಅಂತರದಿಂದ ಎನ್ಸಿಪಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಅರ್ಚನಾ ಪಾಟೀಲ್ ಅವರು ತುಳಜಾಪುರ ಕ್ಷೇತ್ರದ ಬಿಜೆಪಿ ಶಾಸಕ ರಾಣಾ ಜಗಜೀತ್ ಸಿನ್ಹಾ ಪಾಟೀಲ್ ಅವರ ಪತ್ನಿಯಾಗಿದ್ದಾರೆ.
ವಂಚಿತ್ ಬಹುಜನ ಆಘಾಡಿ ಪಕ್ಷವು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯಾಗಿರುವ ಓಂಪ್ರಕಾಶ್ ಅವರ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಲ ಎನ್ಸಿಪಿ ಮತ್ತು ಶಿವಸೇನಾ ಇಬ್ಭಾಗವಾಗಿರುವುದರಿಂದ ಮತದಾರರು ಯಾರ ಪರ ನಿಲ್ಲಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.