‘ಚುನಾವಣೆ ಮೇಲೆ ಕಪ್ಪುಹಣದ ಪ್ರಭಾವ ಹೆಚ್ಚಳ’
ನವದೆಹಲಿ: ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ರದ್ದುಪಡಿಸಿರುವುದರಿಂದ ಲೋಕಸಭಾ ಚುನಾವಣೆಯ ಮೇಲೆ ಕಪ್ಪು ಹಣದ ಪ್ರಭಾವ ಹೆಚ್ಚಾಗಲಿದ್ದು ಅದನ್ನು ತಡೆಯಲು ಸಂಸತ್ತು ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದರು.
ಪಿಟಿಐ ಜತೆ ಸಂದರ್ಶನದಲ್ಲಿ ಮಾತನಾಡಿದ ಅವರು ‘ಚುನಾವಣೆಗೆ ಇನ್ನು ತಿಂಗಳಿದೆ ಎನ್ನುವಾಗ ಮುಖ್ಯವಾದ ಸಂದರ್ಭದಲ್ಲಿ ಚುನಾವಣಾ ಬಾಂಡ್ ರದ್ದಾಯಿತು’ ಎಂದು ಅಭಿಪ್ರಾಯಪಟ್ಟರು.
‘ನನ್ನ ನಂಬಿಕೆ ಮತ್ತು ಊಹೆ ಏನೆಂದರೆ ಕಪ್ಪು ಹಣವು ಚುನಾವಣೆ ಮೇಲೆ ಮತ್ತು ರಾಜಕಾರಣದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ರಾಜಕೀಯ ಪಕ್ಷಗಳು ಹಣಕಾಸು ವರ್ಷದಲ್ಲಿ ತಮ್ಮ ಖಾತೆಯ ಮಾಹಿತಿ ನೀಡಿದಾಗ ಅವು ಎಷ್ಟು ಹಣವನ್ನು ನಗದು ಮೂಲಕ ಮತ್ತು ಎಷ್ಟು ಮೊತ್ತವನ್ನು ಬೆಕ್ಗಳ ಮೂಲಕ ಪಡೆದಿವೆ ಎನ್ನುವುದು ತಿಳಿಯುತ್ತದೆ. ಚುನಾವಣಾ ಬಾಂಡ್ಗಳು ಇದ್ದಾಗ ಚೆಕ್ ಮೂಲಕ ದೇಣಿಗೆ ನೀಡುವುದು ಶೇ 96ಕ್ಕೆ ಏರಿತ್ತು’ ಎಂದು ತಿಳಿಸಿದರು.
‘ಸಂಸತ್ತಿನಲ್ಲಿ ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರನ್ನು ಸಂಪರ್ಕಿಸಿ ಹೊಸ ಪರ್ಯಾಯ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.