ಉಧಂಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಕಾಲ ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಉಧಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿತೇಂದ್ರ ಸಿಂಗ್ ಅವರ ಪರವಾಗಿ ಚುನಾವಣೆ ಪ್ರಚಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಪ್ರದೇಶದ ಜನರು ಶೀಘ್ರದಲ್ಲೇ ತಮ್ಮ ಸಮಸ್ಯೆಗಳನ್ನು ಸಚಿವರು ಮತ್ತು ಶಾಸಕರೊಂದಿಗೆ ಹಂಚಿಕೊಳ್ಳಬಹುದು ಎಂದು ಅವರು ನುಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅಭಿವೃದ್ಧಿ ಯೋಜನೆಗಳು ‘ಟ್ರೇಲರ್‘ ಮಾತ್ರ, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಅದ್ಭುತ ಚಿತ್ರಣವನ್ನು ನೋಡಬಹುದು ಎಂದರು.
ಸದ್ಯ ಜಮ್ಮು ಮತ್ತು ಕಾಶ್ಮೀರ ಸಂಪೂರ್ಣವಾಗಿ ಬದಲಾಗಿದೆ, ಜನರು ನಿರಾಶೆಯಿಂದ ಭರವಸೆಯತ್ತ ಸಾಗುತ್ತಿದ್ದಾರೆ ಎಂದು ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಎಲ್ಲರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಪ್ರಧಾನಿ ಹೇಳಿದರು.
ಕಣಿವೆ ರಾಜ್ಯಕ್ಕೆ ಹೊರಗಿನಿಂದ ಕಂಪನಿಗಳು ಮತ್ತು ಕಾರ್ಖಾನೆಗಳು ಬರುತ್ತವೆ. ಹೊಸ ರೈಲ್ವೆ ಯೋಜನೆಗಳು, ರಸ್ತೆಗಳು, ಸುರಂಗ ಯೋಜನೆಗಳು ಬರಲಿವೆ ಎಂದರು. ಜಮ್ಮು ಮತ್ತು ಕಾಶ್ಮೀರ ನವೋದ್ಯಮಗಳ ಕೇಂದ್ರವಾಗಬೇಕು ಎಂದು ಪ್ರಧಾನಿ ಹೇಳಿದರು.