ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ್ಖಾಲಿ ಪ್ರಕರಣದ ಸಂತ್ರಸ್ತೆ ಹಾಗೂ ಪಶ್ಚಿಮ ಬಂಗಾಳದ ಬಸಿರ್ಹಾತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರ ಅವರನ್ನು ‘ಶಕ್ತಿ ಸ್ವರೂಪ’ ಎಂದು ಬಣ್ಣಿಸಿರುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಬಸಿರ್ಹಾತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಂದೇಶ್ಖಾಲಿಯಲ್ಲಿ ಟಿಎಂಸಿ ಮುಖಂಡ ಶಾಜಹಾನ್ ಶೇಖ್ ಹಾಗೂ ಅವರ ಆಪ್ತರ ವಿರುದ್ಧ ಧ್ವನಿ ಎತ್ತಿದ್ದ ರೇಖಾ ಅವರನ್ನು ಬಿಜೆಪಿಯು ಅಭ್ಯರ್ಥಿಯನ್ನಾಗಿಸಿದೆ. ರೇಖಾ ಅವರಿಗೆ ಪ್ರಧಾನಿ ಮೋದಿ ಕರೆ ಮಾಡಿ ಮಾತನಾಡಿರುವುದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಿದ್ಧತೆ, ಪಕ್ಷಕ್ಕೆ ಮತದಾರರ ಬೆಂಬಲ ಸೇರಿದಂತೆ ಹಲವು ವಿಷಯಗಳ ಬಗ್ಗೆ ರೇಖಾ ಅವರೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಮಹಿಳೆಯರ ಸಮಸ್ಯೆಗಳನ್ನು ಹೇಳಿಕೊಂಡ ರೇಖಾ, ‘ನೀವು ನಮ್ಮೊಂದಿಗಿರುವುದು ರಾಮನೇ ಇದ್ದಂತೆ’ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಸಂದೇಶ್ಖಾಲಿಯ ಪರಿಸ್ಥಿತಿಯಿಂದಾಗಿ ತಾವು 2011ರಿಂದ ಮತದಾನ ಮಾಡಿಲ್ಲ ಎಂಬುದಾಗಿ ರೇಖಾ, ಮೋದಿ ಅವರಿಗೆ ತಿಳಿಸಿದ್ದಾರೆ. ಈ ಬಾರಿ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲಿರುವುದರಿಂದ ಎಲ್ಲರೂ ಮತದಾನ ಮಾಡಬಹುದು ಎಂದು ಪ್ರಧಾನಿ ಅವರಿಗೆ ಭರವಸೆ ನೀಡಿದ್ದಾರೆ.
‘ಸಂದೇಶ್ಖಾಲಿಯಲ್ಲಿ ನೀವು ಯುದ್ಧ ಮಾಡಿದ್ದೀರಿ. ನೀವು ಶಕ್ತಿ ಸ್ವರೂಪ’ ಎಂದು ರೇಖಾ ಅವರನ್ನು ಮೋದಿ ಬಣ್ಣಿಸಿದ್ದಾರೆ. ಟಿಎಂಸಿ ಸರ್ಕಾರ ಜನರ ವಿರುದ್ಧ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಜನಸಮೂಹಕ್ಕೆ ತಲುಪಿಸುವಂತೆ ರೇಖಾ ಅವರಿಗೆ ಹೇಳಿದ್ದಾರೆ.