ಠಾಣೆ: ಲೋಕಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟವು ವಿರೋಧ ಪಕ್ಷದ ಒಕ್ಕೂಟಕ್ಕಿಂತ ಮುಂದಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬುಧವಾರ ಅಭಿಪ್ರಾಯ ಪಟ್ಟರು.
‘ಮನೆಯಲ್ಲಿ ಕುಳಿತು ಫೇಸ್ಬುಕ್ ಲೈವ್ ಮೂಲಕ ಆಡಳಿತ ನಡೆಸುವವರು ಮತ್ತು ಜನರ ಬಳಿಗೆ ತೆರಳಿ ಆಡಳಿತ ನಡೆಸುವವರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂದು ಜನರಿಗೆ ತಿಳಿದಿದೆ’ ಎಂದು ಹೇಳಿದರು.
‘ಹಿಂದಿನ ಸರ್ಕಾರದ ಅವಧಿಯಲ್ಲಿ ಏನೂ ಕೆಲಸ ಆಗಿಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಫೇಸ್ಬುಕ್ ಲೈವ್ನಲ್ಲಿ ನಡೆಯುತ್ತಿತ್ತು. ಮುಖ್ಯಮಂತ್ರಿಯು ಕೇವಲ ಎರಡು ದಿನ ಸಚಿವಾಲಯಕ್ಕೆ ತೆರಳಿ ಸರ್ಕಾರ ನಡೆಸಬಹುದೇ’ ಎಂದು ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದರು.
ಆಡಳಿತಾರೂಢ ಪಕ್ಷದ ಕಾರ್ಯವೈಖರಿಯನ್ನು ಕಂಡು ಜನರು ಮತ ಹಾಕಿದ್ದಾರೆ ಎಂದೂ ತಿಳಿಸಿದರು.
‘ಲೋಕಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಲಿದೆ. ನಮ್ಮ ಸರ್ಕಾರವು ಎರಡು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರು ಮೆಚ್ಚಿದ್ದಾರೆ’ ಎಂದು ಶಿಂದೆ ವಿವರಿಸಿದರು.
‘ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರವು ಚೆನ್ನಾಗಿ ಕೆಲಸ ಮಾಡಿದೆ. ರೈಲ್ವೆ, ರಸ್ತೆ, ನಗರಾಭಿವೃದ್ಧಿ ಮತ್ತು ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.