ಬೆಂಗಳೂರು: ‘ನಾವು ಆಯ್ಕೆಯಾದರೆ ‘ಟೀಂ ಬೆಂಗಳೂರು’ ರಚಿಸಿಕೊಂಡು ಕೇಂದ್ರದಿಂದ ₹ 1 ಲಕ್ಷ ಕೋಟಿ ವಿಶೇಷ ಅನುದಾನವನ್ನು ಬೆಂಗಳೂರಿನ ಅಭಿವೃದ್ಧಿಗೆ ತರುತ್ತೇವೆ’ ಎಂದು ಬೆಂಗಳೂರು ಉತ್ತರ, ಕೇಂದ್ರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಘೋಷಿಸಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಎಂ.ವಿ. ರಾಜೀವ್ ಗೌಡ ಮತ್ತು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರದ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಇದ್ದುದರಿಂದ ಸುದ್ದಿಗೋಷ್ಠಿಗೆ ಗೈರಾದರು.
‘ಬೆಂಗಳೂರಿನ ಸಮಗ್ರ ಅಭಿವೃದ್ಧಿ ನಮ್ಮ ಗುರಿ. ದೂರದೃಷ್ಟಿ ಇಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗೆ ನಾವು ಕಾರ್ಯಯೋಜನೆಗಳನ್ನು ರೂಪಿಸುತ್ತೇವೆ. ಕೇಂದ್ರದಿಂದ ವಿಶೇಷ ಅನುದಾನ ಸಿಕ್ಕಿದರೆ ರಸ್ತೆ, ಮೂಲಸೌಲಭ್ಯ, ಪರಿಸರ ಸಂರಕ್ಷಣೆ ಒತ್ತು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತೇವೆ’ ಎಂದರು.