ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ (ಬಿಎಸ್ಪಿ) ಚಿನ್ನಪ್ಪ ಚಿಕ್ಕಹಾಗಡೆ ಅವರು, ನಾಮಪತ್ರ ಸಲ್ಲಿಸಲು ಶನಿವಾರ ಆನೆ ಏರಿ ಜಿಲ್ಲಾಧಿಕಾರಿ ಕಚೇರಿವರಗೆ ಮೆರವಣಿಗೆ ಬರುವ ಮೂಲಕ ಗಮನ ಸೆಳೆದರು. ಅಂದ ಹಾಗೆ ಇದು ನೈಜ ಆನೆಯಲ್ಲ. ಬದಲಿಗೆ, ಕೃತಕ ಆನೆ!
ನಗರದ ಎಸ್ಪಿ ಕಚೇರಿ ವೃತ್ತದಿಂದ ಶುರುವಾದ ಮೆರವಣಿಗೆಯಲ್ಲಿ ಚಿನ್ನಪ್ಪ ಅವರು ಆನೆ ಏರಿ ಮುಂದೆ ಸಾಗಿದರೆ, ಪಕ್ಷದ ರಾಜ್ಯ ನಾಯಕರು ತೆರದ ವಾಹನದಲ್ಲಿ ಹಿಂಬಾಲಿಸಿದರು. ಬಿರು ಬಿಸಿಲು ಲೆಕ್ಕಿಸದೆ ಪಕ್ಷದ ಕಾರ್ಯಕರ್ತರು ಚಿನ್ನಪ್ಪ ಭಾವಚಿತ್ರ ಹಾಗೂ ಪಕ್ಷದ ಬಾವುಟ ಹಿಡಿದು ಸಾಗಿದರು.
ಡೊಳ್ಳು, ತಮಟೆ ಕಲಾವಿದರು ಸೇರಿದಂತೆ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆ ಮಾರ್ಗದುದ್ದಕ್ಕೂ ಪಕ್ಷದ ಪರ ಘೋಷಣೆಗಳು ಮೊಳಗಿದವು. ಪಕ್ಷದ ರಾಜ್ಯ ಅಧ್ಯಕ್ಷ ಮಾರಸಂದ್ರ ನಾಗೇಶ್, ಹ.ರಾ. ಮಹೇಶ್ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಹಾಗೂ ಸ್ಥಳೀಯ ಮುಖಂಡರು ಇದ್ದರು.