ಈಶ್ವರಪ್ಪ ಸ್ಪರ್ಧೆ ಅನುಮಾನ: ಕಿಮ್ಮನೆ
‘ಲೋಕಸಭೆ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ನಮಗೆ ಈಗಲೂ ಅನುಮಾನವಿದೆ. ಮತದಾನದ ಮುನ್ನಾ ದಿನವಾದ ಮೇ 6ರ ತನಕ ಈಶ್ವರಪ್ಪ ವಿಚಾರದಲ್ಲಿ ನಾವು (ಕಾಂಗ್ರೆಸ್) ಏನೂ ಮಾತನಾಡುವುದಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈಶ್ವರಪ್ಪ ಅವರ ಸ್ಪರ್ಧೆಯಿಂದ ಕಾಂಗ್ರೆಸ್ಗೆ ಯಾವುದೇ ಲಾಭವಿಲ್ಲ ನಷ್ಟವೂ ಇಲ್ಲ. ಎದುರಾಳಿ ಮತಗಳು ವಿಭಜನೆ ಆದರೆ ನಮಗೆ ಲಾಭವೇ. ಹಾಗೆಂದು ನಾವು ಅವರ ಸ್ಪರ್ಧೆಯನ್ನು ನಂಬಿ ಕುಳಿತಿಲ್ಲ. ಬದಲಿಗೆ ಗ್ಯಾರಂಟಿ ಯೋಜನೆಗಳನ್ನು ನಂಬಿ ಸ್ಪರ್ಧಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಬಿ.ವೈ. ರಾಘವೇಂದ್ರ ಹಾಗೂ ಈಶ್ವರಪ್ಪ ಇಬ್ಬರೂ ಹಿಂದುತ್ವದ ಬಗ್ಗೆ ಹೇಳುತ್ತಿದ್ದಾರೆ. ಈಶ್ವರಪ್ಪ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕೊನೆಯ ಗಳಿಗೆಯಲ್ಲಿ ತಟಸ್ಥವಾಗಿ ಉಳಿದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ ಎಂಬ ಅನುಮಾನವಿದೆ’ ಎಂದರು.