ಮಾಗಡಿ: ‘ಅವರು (ಮುನಿರತ್ನ) ಸಿನಿಮಾ ನಿರ್ಮಾಪಕರು. ಅದಕ್ಕಾಗಿ ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದಾರೆ. ತಮ್ಮ ಸಿನಿಮಾದಲ್ಲಿ ಎಲ್ಲವನ್ನೂ ತೋರಿಸುವ ಅವರು, ಅದನ್ನೇ ಹೇಳುತ್ತಾರೆ. ಯಾವುದನ್ನು ಎಲ್ಲಿಗೆ ಲಿಂಕ್ ಮಾಡಬೇಕು, ಎಲ್ಲಿ ಕತ್ತರಿಸಿ ಅಂಟಿಸಬೇಕೆಂಬುದು ಚೆನ್ನಾಗಿ ಗೊತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದರು.
ತಮ್ಮನ್ನು ರಾವಣ ಎಂದು ಮೂದಲಿಸಿದ ಶಾಸಕ ಮುನಿರತ್ನ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಸ್ವರ್ಗ ಮತ್ತು ನರಕವನ್ನು ಎಲ್ಲಿ ತೋರಿಸಬೇಕು ಎಂಬುದು ಅವರಿಗೆ ಕರಗತವಾಗಿದೆ. ರಾವಣ ಮತ್ತು ರಾಮನನ್ನು ಏನು ಮಾಡಬೇಕು? ದುರ್ಯೋಧನನ ಪಾತ್ರವನ್ನು ಎಲ್ಲಿ ತರಬೇಕು, ಸೀತೆ ಇಲ್ಲದಿದ್ದರೆ ಎಲ್ಲಿಂದ ತರಬೇಕೆಂಬುದು ಸಹ ಗೊತ್ತಿದೆ. ಸಿನಿಮಾ ತೆಗೆಯುವ ಅವರು ಎಲ್ಲವನ್ನು ಮಾಡುತ್ತಾರೆ’ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ ಪಕ್ಷದ ತತ್ವ ಮತ್ತು ಸಿದ್ಧಾಂತವನ್ನು ಮೆಚ್ಚಿ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ನ ನೂರಾರು ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಇದನ್ನು ಸಹಿಸಲಾಗದ ವಿರೋಧ ಪಕ್ಷದವರು ನಾವು ಆಮಿಷ ತೋರಿಸಿ ಸೆಳೆಯುತ್ತಿದ್ದೇವೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
28ಕ್ಕೆ ನಾಮಪತ್ರ: ‘ಮಾರ್ಚ್ 28ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರಿಗೂ ಕರೆ ಕೊಟ್ಟಿದ್ದೇನೆ’ ಎಂದು ಹೇಳಿದರು.