ಚಾಮರಾಜನಗರ: ‘ನಗರದ ಶಿವಕುಮಾರಸ್ವಾಮಿಭವನದಲ್ಲಿ ಮಾರ್ಚ್ 31ರಂದು ಸಂಜೆ 4 ಗಂಟೆಗೆ ‘ಮೇ ಭಿ ಚೌಕಿದಾರ್’ (ನಾನು ಕೂಡ ಕಾವಲುಗಾರ) ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ’ ಎಂದು ಗುಂಡ್ಲುಪೇಟೆ ಶಾಸಕ ಎಸ್.ನಿರಂಜನಕುಮಾರ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಈ ಕಾರ್ಯಕ್ರಮವು ದೇಶದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಎಲ್ಲರೂ ಭಾಗವಹಿಸಬಹುದು. ಯುವಸಮುದಾಯ, ರೈತರು, ಮಹಿಳೆಯರು ಸೇರಿದಂತೆ ರಾಷ್ಟ್ರದ 60 ಲಕ್ಷಕ್ಕೂ ಹೆಚ್ಚು ಮಂದಿ ನಮೋ ಆ್ಯಪ್ ಮೂಲಕ ‘ಮೇ ಭಿ ಚೌಕಿದಾರ್’ ಎಂದುತಮ್ಮನ್ನು ತಾವುಘೋಷಣೆಮಾಡಿಕೊಂಡಿದ್ದಾರೆ’ ಎಂದರು.
‘ದೇಶದ ಎಲ್ಲ ವರ್ಗದ ಜನರು, ವಿಚಾರವಂತರು, ಅನುಭವಸ್ಥರು ನಮ್ಮ ಹಾಗೂ ದೇಶದ ರಕ್ಷಣೆಗೆ ಮೋದಿ ಬೇಕು ಎನ್ನುತ್ತಿದ್ದಾರೆ. ದೇಶದ ಆರ್ಥಿಕ ಸದೃಢವಾಗಿ ಮುಂದುವರಿಯಲು ಮೋದಿ ಸರ್ಕಾರ ಬೇಕು. ಮೋದಿಗಾಗಿ ಮತಚಲಾಯಿಸಬೇಕು ಎನ್ನುತ್ತಿದ್ದಾರೆ’ ಎಂದು ಹೇಳಿದರು.
ಮೋದಿ ಅವರ ನೇರ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲರೂ ಭಾಗವಹಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರಸ್ವಾಮಿ, ನೂರೊಂದು ಶೆಟ್ಟಿ, ಮುಖಂಡರಾದ ಮಲ್ಲೇಶ್, ಗೋವಿಂದರಾಜು ಇದ್ದರು.