ಪರಷೋತ್ತಮ ರೂಪಾಲ ಅವರೊಂದಿಗೆ ಸೆಣಸಲು ಕಾಂಗ್ರೆಸ್, ಗುಜರಾತ್ ವಿಧಾನಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಪರೇಶ್ ಧನಾನಿ ಅವರನ್ನು ಅಖಾಡಕ್ಕಿಳಿಸಿದೆ. ಧನಾನಿ, 2002ರಲ್ಲಿ ಅಮ್ರೇಲಿ ವಿಧಾನಸಭಾ ಕ್ಷೇತ್ರದಿಂದ ರೂಪಾಲ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ರೂಪಾಲ ಅವರು ರಜಪೂತರ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ಈ ಬಾರಿ ಧನಾನಿ ಗೆಲ್ಲಬಹುದೆಂಬ ವಿಶ್ವಾಸ ಕಾಂಗ್ರೆಸ್ ವರಿಷ್ಠರದ್ದಾಗಿದೆ.
ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆಯಾದ ಎನ್ಎಸ್ಯುಐ ಮೂಲಕ ರಾಜಕೀಯ ಪ್ರವೇಶಿಸಿದ್ದ ಧನಾನಿ, ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.
ಧನಾನಿ ಅವರು ಪಾಟೀದಾರ್ ಸಮುದಾಯದ ಉಪ ಜಾತಿಯಾದ ಲೇವಾ ಪಟೇಲ್ಗೆ ಸೇರಿದವರಾಗಿದ್ದು, ಈ ಸಮುದಾಯದವರು ಈ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಬ್ಬರು ಪ್ರಬಲ ಅಭ್ಯರ್ಥಿಗಳಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.