ಬೆಂಗಳೂರು: ‘ಮನುವಾದ ಪ್ರತಿಪಾದನೆಯೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯಂಥವರ ಕೆಲಸ. ಇಂಥವರೇ ನಿಜವಾದ ಅಪರಾಧಿಗಳು’ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.
‘ನಾಯಿ ಬೊಗಳಿದರೆ ತಲೆಕೆಡಿಸಿಕೊಳ್ಳುವ ಜನ ನಾವಲ್ಲ’ ಎಂದು ಪ್ರತಿಭಟನಾಕಾರನ್ನು (ದಲಿತ ಸಂಘಟನೆಗಳ ಕಾರ್ಯಕರ್ತರು) ಉದ್ದೇಶಿಸಿ ಹೆಗಡೆ ನೀಡಿದ ಹೇಳಿಕೆಗೆ ಭಾನುವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಖರ್ಗೆ, ‘ಹೆಗಡೆ ಬಾಯಿಂದ ಪ್ರಧಾನಿಯವರೇ ಈ ರೀತಿ ಹೇಳಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮೋದಿ ಮನಸ್ಸು ಮಾಡಿದ್ದರೆ ಇದನ್ನು ನಿಲ್ಲಿಸಬಹುದು. ಸಂಸತ್ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಜನರ ಹಕ್ಕು. ಪ್ರತಿಭಟನೆ, ಸತ್ಯಾಗ್ರಹ ಮಾಡುವುದು ಬೇಡ ಅಂದರೆ ಹೇಗೆ’ ಎಂದೂ ಪ್ರಶ್ನಿಸಿದರು.
ಕೊಳಕು ಮನಸ್ಥಿತಿ: ‘ದಲಿತರನ್ನು ಬೀದಿನಾಯಿಗಳಿಗೆ ಹೋಲಿಸುವಂಥ ಅನಂತಕುಮಾರ ಹೆಗಡೆ ಹೇಳಿಕೆ ಅತ್ಯಂತ ಕೊಳಕು ಮನಸ್ಥಿತಿ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
‘ಅನಂತಕುಮಾರ ಹೆಗಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯ ವಕ್ತಾರ. ಉದ್ದೇಶಪೂರ್ವಕವಾಗಿಯೇ ಇಂಥ ಹೇಳಿಕೆ ನೀಡುವಂತೆ ಹೆಗಡೆಗೆ ಕುಮ್ಮಕ್ಕು ನೀಡಲಾಗುತ್ತಿದೆ’ ಎಂದರು.
‘ಪ್ರಧಾನಿ ಮೋದಿಯೇ ಅನಂತಕುಮಾರ ಹೆಗಡೆ ಅವರನ್ನು ಕೇಂದ್ರ ಸಚಿವ ಮಾಡಿದ್ದಾರೆ. ಈ ರೀತಿ ಹೇಳಿಕೆ ನೀಡಲೆಂದೇ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂದೂ ದೂರಿದರು.