ಬೆಂಗಳೂರು:ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಕೇಕ್ ಕತ್ತರಿಸಲು ಕತ್ತಿಯನ್ನು ಬಳಸಿದ್ದಕ್ಕೆ ನಟ ದುನಿಯಾ ವಿಜಯ್ ಅವರು ಕ್ಷಮೆ ಯಾಚಿಸಿದ್ದಾರೆ.
‘ಕೇಕ್ ಕತ್ತರಿಸುವ ಮೊದಲು ಯಾರೋ ನನ್ನ ಕೈಗೆ ಕತ್ತಿ ಕೊಟ್ಟರು. ನಾನು ಅದನ್ನು ಬಳಸಿ ಕೇಕ್ ಕತ್ತರಿಸಿದೆ. ಅದು ಖಂಡಿತವಾಗಿಯೂ ಅಪರಾಧ. ನಾನು ಹಾಗೆ ಮಾಡಿದ್ದನ್ನು ನೋಡಿ ಯಾರೂ ಉದ್ರಿಕ್ತರಾಗಬಾರದು. ಅಂತಹ ಕೆಲಸವನ್ನು ಯಾರೂ ಮಾಡಬಾರದು’ ಎಂದು ವಿಜಯ್ ಅವರು ಸುದ್ದಿಗಾರರ ಬಳಿ ಹೇಳಿದರು.
‘ನಾನು ಮಾಡಿದ್ದು ಖಂಡಿತ ತಪ್ಪು. ಆದರೆ ಅದು ಹೇಗೆ ನಡೆಯಿತು ಎಂಬುದು ಗೊತ್ತಾಗುತ್ತಿಲ್ಲ. ಯಾರೋ ಅಭಿಮಾನಿಗಳು ಕತ್ತಿ ಕೊಟ್ಟರು. ನಾನು ಕೇಕ್ ಕಟ್ ಮಾಡಿದೆ. ನನಗೆ ಗೊತ್ತಿಲ್ಲದೆ ಆಗಿರುವ ತಪ್ಪು ಇದು. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಅವರು ಸಮಜಾಯಿಷಿ ನೀಡಿದರು.
ಈ ವಿಚಾರವಾಗಿ ಹೇಳಿಕೆ ಕೊಡುವಂತೆ ಪೊಲೀಸರು ಕರೆದರೆ, ತಾವು ಹೇಳಿಕೆ ನೀಡುವುದಾಗಿಯೂ ವಿಜಯ್ ಸ್ಪಷ್ಟಪಡಿಸಿದರು. ವಿಜಯ್ ಅವರ ಬೆಂಗಳೂರಿನ ನಿವಾಸದಲ್ಲಿ ಭಾನುವಾರ ರಾತ್ರಿ 46ನೇ ಜನ್ಮದಿನದ ಆಚರಣೆ ಇತ್ತು.