ಲಕ್ಕಿ, ಸಂತು ಸ್ಟ್ರೈಟ್ ಫಾರ್ವರ್ಡ್, ಕೆಜಿಎಫ್ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಜಾಕಿ ತಿಮ್ಮೇಗೌಡ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಅಜಯ್ ರಾವ್ ಮತ್ತು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿರುವ ಹೊಸ ಸಿನಿಮಾಕ್ಕೆ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನಡಿ ಟಿ.ಆರ್.ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ. ‘ಜಾಕಿ’ಯವರು ತಮ್ಮ ಮೊದಲ ಸಿನಿಮಾಕ್ಕೆಪಕ್ಕಾ ಗ್ರಾಮೀಣ ಸೊಗಡಿನ ಕಥೆ ಆಯ್ದುಕೊಂಡಿದ್ದಾರಂತೆ.ಕೌಟುಂಬಿಕ ಮತ್ತು ಹಾಸ್ಯಪ್ರಧಾನ ಕಥಾಹಂದರ ಹೊಂದಿದೆಯಂತೆ.
ನಟ ಯಶ್ ಅವರ ತಂಡಲ್ಲಿದ್ದ ತಿಮ್ಮೇಗೌಡರಿಗೆ ‘ಜಾಕಿ’ ಸರ್ ನೇಮ್ ನೀಡಿದ್ದು ಯಶ್ ಅವರಂತೆ. ‘ಯಶ್ ಸಿನಿಮಾವನ್ನೇ ಮೊದಲು ನಿರ್ದೇಶಿಸಬೇಕೆಂದುಕೊಂಡಿದ್ದೆ. ಅಷ್ಟರಲ್ಲಿ ಹ್ಯಾಟ್ರಿಕ್ ಸಿನಿಮಾಗಳ ನಿರ್ಮಾಪಕರು ಈ ಸಿನಿಮಾ ನಿರ್ದೇಶನದ ಅವಕಾಶ ನೀಡಿದರು. ಮುಂದಿನ ದಿನಗಳಲ್ಲಿ ಯಶ್ ನಟನೆಯ ಸಿನಿಮಾ ನಿರ್ದೇಶನ ಮಾಡುವ ಅವಕಾಶದ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ಜಾಕಿ.
ಈ ಸಿನಿಮಾದಲ್ಲಿ ಅಜಯ್ ರಾವ್ ಅವರದ್ದು ಪಕ್ಕಾ ಹಳ್ಳಿ ಹುಡುಗನ ಪಾತ್ರ. ನಾಯಕಿ ಸಂಜನಾ ಆನಂದ್ ಅವರದ್ದು ಹಳ್ಳಿ ಹುಡುಗಿ ಪಾತ್ರ. ‘ತಾಯಿಗೆ ತಕ್ಕ ಮಗ’ ಸಿನಿಮಾದ ನಂತರ ಕೊಂಚ ಬಿಡುವು ತೆಗೆದುಕೊಂಡಿದ್ದ ಅಜಯ್ ರಾವ್, ಈಗ ‘ಕೃಷ್ಣ ಟಾಕೀಸ್’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದರ ನಡುವೆ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನಇನ್ನೂ ಹೆಸರಿಡದ 7ನೇ ಚಿತ್ರದಲ್ಲಿ ನಟಿಸಲಿದ್ದಾರೆ. ಅಜಯ್ಗೆ ಇದು 27ನೇ ಸಿನಿಮಾ. ಮೊದಲ ಬಾರಿ ಹಳ್ಳಿ ಸೊಗಡು ಮತ್ತು ಹಾಸ್ಯ ಪ್ರಧಾನ ಚಿತ್ರದಲ್ಲಿ ಅಜಯ್ ರಾವ್ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ ಸೂಕ್ತ ಟೈಟಲ್ ಹುಡುಕಾಟ ನಡೆಯುತ್ತಿದೆ.
ಹೊಸಕೆರೆಹಳ್ಳಿಯ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಈ ಸಿನಿಮಾದ ಮುಹೂರ್ತ ನಡೆದಿದ್ದು,ಟಿ.ಆರ್.ಚಂದ್ರಶೇಖರ್ ಕ್ಲಾಪ್ ಮಾಡಿದರೆ, ಯೋಗಾನಂದ್ ಕ್ಯಾಮೆರಾ ಚಾಲೂ ಮಾಡಿ, ನಿರ್ದೇಶಕ ಜಾಕಿ ಆ್ಯಕ್ಷನ್ ಕಟ್ ಹೇಳಿದ್ದಾರೆ.ಇದೇ ತಿಂಗಳು ಶೂಟಿಂಗ್ ಆರಂಭವಾಗಲಿದ್ದು, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು ಭಾಗದಲ್ಲಿ ಕಬ್ಬಿನಗದ್ದೆ, ತೋಟಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.
ಪ್ರಶಾಂತ್ ರಾಜಪ್ಪ ಸಂಭಾಷಣೆ, ಶ್ರೀಧರ್ ವಿ.ಸಂಭ್ರಮ್ ಸಂಗೀತ ನಿರ್ದೇಶನ,ನವೀನ್ ಕುಮಾರ್ ಎಸ್. ಛಾಯಾಗ್ರಹಣ ಅವರದ್ದು. ‘ಭರ್ಜರಿ’ ಸಿನಿಮಾದ ಚೇತನ್ ಮತ್ತು ಜಯಂತ್ ಕಾಯ್ಕಿಣಿ, ಗೌಸ್ ಪೀರ್ ಅವರ ಸಾಹಿತ್ಯ ಈ ಚಿತ್ರಕ್ಕೆ ಇದೆ. ಸಂಕಲನ ಕೆ.ಎಂ.ಪ್ರಕಾಶ್, ನೃತ್ಯ ಸಂಯೋಜನೆ ಮೋಹನ್, ಸಾಹಸ ವಿಕ್ರಮ್ ಮೋರ್ ಅವರದ್ದು.
ತಾರಾಗಣದಲ್ಲಿ ಮುನಿರಾಜ್, ತಬಲ ನಾಣಿ, ಪ್ರಮೋದ್ ಶೆಟ್ಟಿ,ಶರತ್ ಲೋಹಿತಾಶ್ವ , ಗಿರಿ, ಅರುಣ ಬಾಲರಾಜ್ ನಟಿಸಲಿದ್ದಾರೆ. ಎಸ್.ಅಭಿ ಹಾಗೂ ಅರುಣ್ ಕುಮಾರ್ ಸಹ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.