ಬೆಂಗಳೂರು: ಮೊಬೈಲ್ ಫೋಟೋಗ್ರಫಿಯ ಕಥೆ ಹೇಳುತ್ತದೆಯೇ ಭಾವಚಿತ್ರ? ಅಂಥದ್ದೊಂದು ಕುತೂಹಲ ಹುಟ್ಟಿಸಿಕೊಂಡೇ ತೆರೆಯ ಮೇಲೆ ಫೆ. 18ರಂದು ಮೂಡಿಬರುತ್ತಿದೆ ‘ಭಾವಚಿತ್ರ’. ಇನ್ನು ಕೆಲವೇ ದಿನಗಳಿರುವುದರಿಂದ ಕಥೆಯ ಎಳೆಯನ್ನು ಬಿಟ್ಟುಕೊಡದೇ ಹೆಚ್ಚಿನ ಮಾಹಿತಿಯನ್ನು ಥಿಯೇಟರ್ನಲ್ಲೇ ನೋಡಿ ಎಂದಿದೆ ಚಿತ್ರತಂಡ.
‘ಭಾವಚಿತ್ರ’ದ ನಾಯಕಿ ಗಾನವಿ ಲಕ್ಷ್ಮಣ್. ಚಕ್ರವರ್ತಿ ಅವರು ನಾಯಕ. ಅಂದಹಾಗೆ ಗಾನವಿ ಅವರು ‘ಮಗಳು ಜಾನಕಿ’ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದವರು.
‘ಭಾವಚಿತ್ರ’ಕ್ಕೆಗಿರೀಶ್ ಕುಮಾರ್ ಬಿ. ಅವರ ಕಥೆ, ನಿರ್ದೇಶನವಿದೆ. ಗಿರೀಶ್ ಅವರ ಎರಡನೇ ಚಿತ್ರವಿದು. ಚಿತ್ರಕಥೆಗೆ ಗಿರೀಶ್ ಬಿಜ್ಜಳ ಕೈಜೋಡಿಸಿದ್ದಾರೆ. 55 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು.ಬೆಂಗಳೂರು, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು ಕಡೆ ಚಿತ್ರೀಕರಣ ನಡೆದಿದೆ.
ಚಿತ್ರದಲ್ಲೇನಿದೆ?
‘ಮೊಬೈಲ್ ಬಂದಾಗಿನಿಂದ ಎಲ್ಲರಿಗೂ ಭಾವಚಿತ್ರದ ಮೇಲೆ ಹೆಚ್ಚಿನ ಒಲವು. ಕ್ಯಾಮೆರಾ ಹಾಗೂ ಭಾವಚಿತ್ರದ ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದನ್ನು ಟೆಕ್ನೋ ಥ್ರಿಲ್ಲರ್ ಅಂತಲೂ ಕರೆಯಬಹುದು. ಇದಷ್ಟೇ ಅಲ್ಲ. ಪ್ರೀತಿ ಹಾಗೂ ಭಾವನಾತ್ಮಕ ಸನ್ನಿವೇಶಗಳು ನಮ್ಮ ಚಿತ್ರದಲ್ಲಿವೆ’ ಎನ್ನುತ್ತಾರೆ ನಿರ್ದೇಶಕ ಗಿರೀಶ್.
ವುಡ್ ಕ್ರೀಪರ್ಸ್ ಸಂಸ್ಥೆ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.ವಿನಾಯಕ ನಾಡಕರ್ಣಿ ನಿರ್ಮಾಪಕರು. ಶಿವು ಬೇರಗಿ ಹಾಗೂ ವಿಶ್ವಜಿತ್ ರಾವ್ ಹಾಡು ಬರೆದಿದ್ದಾರೆ. ಬರೆದಿರುವ ಹಾಡುಗಳಿಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದಾರೆ. ಅಜೇಯ್ ಕುಮಾರ್ ಛಾಯಾಗ್ರಹಣ ಹಾಗೂ ರತೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.