ಹೈದರಾಬಾದ್: ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಪುಷ್ಪ ಸಿನಿಮಾದ ಸಂಗೀತ ನಿರ್ದೆಶಕ ದೇವಿಶ್ರೀ ಪ್ರಸಾದ್ ವಿರುದ್ಧ ದೂರು ದಾಖಲಿಸಿದ್ದಾರೆ.
ಹೈದರಾಬಾದ್ನ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ಅವರಿಗೆ ದೂರು ನೀಡಿದ್ದು, ದೇವಿಶ್ರೀ ಪ್ರಸಾದ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೇವಿಶ್ರೀ ಪ್ರಸಾದ್ ಅವರು ಹಿಂದೂಗಳು ಹಾಗೂ ದೇವರನ್ನು ನಂಬುವವರ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಸಂಗೀತ ನೀಡಿರುವ ಪುಷ್ಪ ಸಿನಿಮಾ ಭರ್ಜರಿ ಪ್ರದರ್ಶನಕಾಣುತ್ತಿದೆ. ಬಿಡುಗಡೆಯಾಗಿ ಎರಡೆ ದಿನಕ್ಕೆ ₹ 50 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.
ಸಿನಿಮಾದ ಪ್ರಚಾರ ಸಮಾರಂಭದಲ್ಲಿ ಅವರು ನಟಿ ಸಮಂತಾ ಅಭಿನಯದ ಐಟಂ ಸಾಂಗ್ ಬಗ್ಗೆ ಮಾತನಾಡಿದ್ದರು. ’ನನಗೆ ಐಟಂ ಸಾಂಗುಗಳು ಅಂದ್ರೆ ದೇವರ ಹಾಡಿನ ಸಮ’ ಎಂದು ಹೇಳಿದ್ದರು. ಈ ಮಾತು ವಿವಾದಕ್ಕೆ ಕಾರಣವಾಗಿತ್ತು.