ಮುಂಬೈ: ‘ಬಾಲಿವುಡ್ ಗೀತೆರಚನೆಕಾರ ಜಾವೇದ್ ಅಖ್ತರ್ ಅವರ ವಿರುದ್ಧ ನಟಿ ಕಂಗನಾ ರಣಾವತ್ ಅವರು ಟಿವಿ ಸಂದರ್ಶನವೊಂದರಲ್ಲಿ ನೀಡಿದ ಮಾನಹಾನಿಕರ ಹೇಳಿಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಕಂಗನಾ ಮುಂದಿನ ವಿಚಾರಣೆ ಸಂದರ್ಭ ಕಡ್ಡಾಯವಾಗಿ ಹಾಜರಿರಬೇಕು’ ಎಂದು ಕೋರ್ಟ್ ಹೇಳಿದೆ.
‘ಬಾಲಿವುಡ್ನಲ್ಲಿರುವ ‘ಕಾಟೇರಿ‘ ಪದ್ಧತಿ (ಅವಕಾಶಕ್ಕಾಗಿ ವೈಯಕ್ತಿಕ ಸಖ್ಯ– ಕಾಸ್ಟ್ ಕೌಚಿಂಗ್) ಇದೆ ಎಂದು ಹೇಳುತ್ತಾ ಅದರಲ್ಲಿ ತಮ್ಮ ಹೆಸರನ್ನು ವಿನಾ ಕಾರಣ ಎಳೆದು ತರಲಾಗಿದೆ. ಇದರಿಂದ ತನ್ನ ಗೌರವಕ್ಕೆ ಚ್ಯುತಿ ಉಂಟಾಗಿದೆ’ ಎಂಬುದು ಜಾವೇದ್ ಅವರ ದೂರು.
‘ಇಂಥ ಹೇಳಿಕೆ ನೀಡಿದ ಕಂಗನಾ ಅವರ ಬಂಧನದ ವಾರಂಟ್ ಹೊರಡಿಸಬೇಕು’ ಎಂದು ಜಾವೇದ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕಂಗನಾ ಅವರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿ, ‘ಕಂಗನಾ ಅವರು ತಮ್ಮ ವೃತ್ತಿಯ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗಲು ಆಗುತ್ತಿಲ್ಲ. ಆದ್ದರಿಂದ ಅವರ ವೈಯಕ್ತಿಕ ಹಾಜರಾತಿಗೆ ಶಾಶ್ವತ ವಿನಾಯಿತಿ ನೀಡಬೇಕು’ ಎಂದು ಕೋರಿದರು.
‘ಹಾಗಿದ್ದರೆ ಮುಂದಿನ ವಿಚಾರಣೆ ವೇಳೆಗೆ ಅವರು ಕಡ್ಡಾಯವಾಗಿ ಹಾಜರಾಗಬೇಕು’ ಎಂದು ಹೇಳಿದ ನ್ಯಾಯಾಧೀಶ ಆರ್.ಆರ್.ಖಾನ್ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದರು.
‘ಕಂಗನಾ ವಿರುದ್ಧ ಬಂಧನದ ವಾರಂಟ್ ಹೊರಡಿಸಬೇಕು’ ಎಂದು ಕೋರಿದ್ದ ಜಾವೇದ್ ಅವರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.