ರಮೇಶ್ ಅರವಿಂದ್ ನಾಯಕನಾಗಿ ನಟಿಸಿದ್ದ ‘ಪುಷ್ಪಕ ವಿಮಾನ’ ಸಿನಿಮಾ ನಿರ್ದೇಶಿಸಿದ್ದು ಎಸ್. ರವೀಂದ್ರನಾಥ್. ವಿಖ್ಯಾತ್ ಪ್ರೊಡಕ್ಷನ್ನಡಿ ತಯಾರಾದ ಈ ಚಿತ್ರ ಅವರ ಚೊಚ್ಚಲ ಸಿನಿಮಾವೂ ಹೌದು. ಇದು ರಮೇಶ್ ಅರವಿಂದ್ ನಟನೆಯ ನೂರನೇ ಸಿನಿಮಾ.
ರವೀಂದ್ರನಾಥ್ ತಮ್ಮ ನಿರ್ದೇಶನ ಕೌಶಲ, ಸಾಮರ್ಥ್ಯ ಎಂತಹುದು ಎನ್ನುವುದನ್ನು‘ಪುಷ್ಪಕ ವಿಮಾನ’ದ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಸಾಮರ್ಥ್ಯ ನೋಡಿಯೇ ನಿರ್ಮಾಪಕ ವಿಖ್ಯಾತ್ಈಗ ಮತ್ತೆ ಅವರಿಗೆ ಸಾಥ್ ನೀಡಿದ್ದಾರೆ. ಇನ್ನೂ ಹೆಸರಿಡದ ‘ಪ್ರೊಡಕ್ಷನ್ ನಂಬರ್ 4’ಚಿತ್ರಕ್ಕೆ ರವೀಂದ್ರನಾಥ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಹೊಸ ಸಿನಿಮಾ ಕುರಿತು ಹಲವು ಸಂಗತಿಗಳನ್ನು ಅವರು ‘ಪ್ರಜಾ ಪ್ಲಸ್’ ಜತೆಗೆ ಹಂಚಿಕೊಂಡಿದ್ದಾರೆ.
‘ಕೊರೊನಾ ಲಾಕ್ಡೌನ್ಗೂ ಮುಂಚೆಯೇ ಈ ಚಿತ್ರ ಮಾಡುವ ಆಲೋಚನೆ ಬಂದಿತ್ತು. ಮೊದಲೇ ಕಥೆ–ಚಿತ್ರಕಥೆ ಒಂದು ಹಂತಕ್ಕೆ ಬಂದಿತ್ತು. ಲಾಕ್ಡೌನ್ ಅವಧಿಯಲ್ಲಿ ಅದಕ್ಕೆ ಅಂತಿಮ ರೂಪ ಸಿಕ್ಕಿತಷ್ಟೆ. ಕಥೆ ಹೊಳೆದಾಗಲೇ ಧನಂಜಯ್ ಮತ್ತು ರಚಿತಾ ರಾಮ್ ಅವರ ಹೆಸರು ಮನಸ್ಸಿನಲ್ಲಿ ಮೂಡಿದ್ದವು. ಇತ್ತೀಚೆಗಷ್ಟೇ ಅವರಿಗೆ ಕಥೆಯ ಒಂದೆಳೆ ಹೇಳಿ ಪಾತ್ರದ ಬಗ್ಗೆ ವಿವರಿಸಿದಾಗ ಇಬ್ಬರೂ ಖುಷಿಯಿಂದ ಒಪ್ಪಿಕೊಂಡರು. ಇದರಲ್ಲಿ ಲವ್, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಇರಲಿದೆ’ ಎಂದು ವಿವರಿಸಿದರು.
‘ಧನಂಜಯ್ ಅವರ ಹುಟ್ಟುಹಬ್ಬ ಇದೇ 23ರಂದು ಇದೆ. ಆ ದಿನ ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಲು ಯೋಜಿಸಿದ್ದೇವೆ. ಈ ಫಸ್ಟ್ಲುಕ್ ಚಿತ್ರದ ಬಗ್ಗೆ ಹಲವು ಮಾಹಿತಿಯನ್ನು ಬಿಚ್ಚಿಡಲಿದೆ. ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕಲಾವಿದರು. ಈ ಇಬ್ಬರು ಹಿಂದೆಂದೂ ಕಾಣಿಸಿಕೊಳ್ಳದಿರುವ ಪಾತ್ರಗಳಲ್ಲಿ ನಟಿಸಲಿದ್ದಾರೆ. ಹೊಸ ಬಗೆಯ ಪಾತ್ರಗಳ ಮುಖೇನ ಅವರು ಸಿನಿಪ್ರಿಯರ ಎದುರು ಬರಲಿದ್ದಾರೆ’ ಎನ್ನುವ ಮಾತು ಸೇರಿಸಿದರು.
‘ಬೆಂಗಳೂರು ಮತ್ತು ಶೃಂಗೇರಿ ಸುತ್ತಮುತ್ತ ಶೂಟಿಂಗ್ ನಡೆಸುವ ಯೋಜನೆ ಇದೆ. ಗುರು ಕಶ್ಯಪ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಎಸ್.ಕೆ. ರಾವ್ ಅವರ ಛಾಯಾಗ್ರಹಣವಿದೆ’ ಎಂದರು.
ತಮ್ಮ ಮುಂದಿನ ಯೋಜನೆ ಬಗ್ಗೆ ಮಾಹಿತಿ ತೆರೆದಿಟ್ಟ ರವೀಂದ್ರನಾಥ್, ‘ಈ ಹಿಂದೆಯೇ ‘ಕಂಟ್ರಿಮೇಡ್ ಚಾರಿ’ ಚಿತ್ರ ಪ್ರಕಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಲಾಕ್ಡೌನ್ನಿಂದಾಗಿ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಎರಡನೇ ಸಿನಿಮಾ ಪೂರ್ಣಗೊಳಿಸಿದ ನಂತರ ಕೈಗೆತ್ತಿಕೊಳ್ಳಲಿದ್ದೇನೆ. ‘ರಣವಿಕ್ರಮ’ ಮತ್ತು ‘ಪುಷ್ಪಕ ವಿಮಾನ’ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಶಿವಾಂಕ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿರುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.