ಕೊರೊನಾ ವೈರಾಣು ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಹೊತ್ತಿನಲ್ಲಿ ಖಿಲಾಡಿಗಳ ಖಿಲಾಡಿ ಅಕ್ಷಯ್ ಕುಮಾರ್ ಗಮನ ಸೆಳೆಯುವ ಒಂದು ಮಾತು ಆಡಿದ್ದಾರೆ. ‘ನಾನು ನನ್ನ ಸಿನಿಮಾಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುತ್ತೇನೆ. ಹೀಗಿದ್ದರೂ ಕೋವಿಡ್–19 ರೋಗಕ್ಕೆ ಹೆದರುವೆ’ ಎನ್ನುವುದು ಖಿಲಾಡಿ ಆಡಿರುವ ಮಾತು.
ಕೊರೊನಾ ವೈರಾಣುವಿನ ಪರಿಣಾಮಗಳು ಭೀಕರವಾಗಿ ಇರಬಹುದು ಎಂದು ಕೂಡ ಅವರು ಎಚ್ಚರಿಸಿದ್ದಾರೆ. ‘ನಡುವೆ ಅಂತರವಿರಲಿ’ ಎನ್ನುವ ಸೂತ್ರವನ್ನು ಜನ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ಈ ಕರೆಗೆಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡ ದನಿಗೂಡಿಸಿದ್ದಾರೆ.
ತಮ್ಮ ಟ್ವಿಟರ್ ಖಾತೆಯ ಮೂಲಕ ಒಂದು ವಿಡಿಯೊ ಪ್ರಸಾರ ಮಾಡಿರುವ ಅಕ್ಷಯ್ ಕುಮಾರ್ ಅವರು, ‘ನಾನು ನನ್ನ ಅಭಿಮಾನಿಗಳನ್ನು ಸಾಮಾನ್ಯವಾಗಿ ಪ್ರೀತಿಯಿಂದ ಮಾತನಾಡಿಸುತ್ತೇನೆ. ಆದರೆ ಇಂದು ನಾನು ಕೋಪದಿಂದ ಮಾತನಾಡಿಸುತ್ತಿದ್ದೇನೆ. ಏಕೆಂದರೆ, ಪರಿಸ್ಥಿತಿ ಸಹಜವಾಗಿ ಇದೆ ಎನ್ನುವ ರೀತಿಯಲ್ಲಿ ಅವರು ಬೀದಿಗಳಲ್ಲಿ ಓಡಾಡಿದ್ದಾರೆ’ ಎಂದು ಹೇಳಿದ್ದಾರೆ.
‘ನಿಮ್ಮ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುತ್ತ ಇವೆಯೇ? ಏನಾಗಿದೆ? ಲಾಕ್ಡೌನ್ ಎಂಬ ಪದದ ಅರ್ಥ ಯಾರಿಗೆ ಗೊತ್ತಿಲ್ಲ? ಇದರ ಅರ್ಥ ಮನೆಯಲ್ಲೇ, ತಮ್ಮ ಕುಟುಂಬದ ಜೊತೆಯಲ್ಲೇ ಇರಬೇಕು ಎಂದು. ಮೋಜು ಮಾಡಲು ರಸ್ತೆಗೆ ಹೋಗಬೇಡಿ. ಹೊರಗೆ ಹೋಗುವ ಮೂಲಕ ಧೈರ್ಯಶಾಲಿಗಳು ಎಂದು ತೋರಿಸಲು ನೀವು ಯತ್ನಿಸುತ್ತ ಇದ್ದೀರಿ. ಆದರೆ ಇದು ವ್ಯರ್ಥವಾಗುತ್ತದೆ’ ಎಂದು ಅಕ್ಷಯ್ ಹೇಳಿದ್ದಾರೆ.
‘ಇದೇ ರೀತಿ ಮಾಡಿದರೆ ನೀವೂ ಆಸ್ಪತ್ರೆಗೆ ಹೋಗುತ್ತೀರಿ, ನಿಮ್ಮ ಕುಟುಂಬದವರನ್ನೂ ಆಸ್ಪತ್ರೆಗೆ ಒಯ್ಯುತ್ತೀರಿ. ಕಾಳಜಿ ವಹಿಸದೆ ಇದ್ದರೆ ಯಾರೂ ಹೊರಗೆ ಉಳಿಯುವುದಿಲ್ಲ. ನಿಮ್ಮ ಮಿದುಳನ್ನು ಉಪಯೋಗಿಸಿ, ನಾನು ಪ್ರತೀ ವ್ಯಕ್ತಿಯಲ್ಲೂ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಖಿಲಾಡಿ ಕೇಳಿಕೊಂಡಿದ್ದಾರೆ.
‘ಇದು ತಮಾಷೆ ಅಲ್ಲ. ಈ ರೋಗವು ಎಲ್ಲರಲ್ಲೂ ಚಿಂತೆ ಮೂಡಿಸಿದೆ. ಇಡೀ ವಿಶ್ವ ಸಮಸ್ಯೆಗೆ ಸಿಲುಕಿಕೊಂಡಿದೆ. ನೀವೆಲ್ಲರೂ ನಿಮ್ಮ ಕುಟುಂಬದವರ ಪಾಲಿಗೆ ಹೀರೊ ಆಗಬಹುದು, ನಿಮ್ಮ ಜೀವನದಲ್ಲಿ ಖಿಲಾಡಿ ಆಗಬಹುದು. ಆದರೆ, ಮನೆಯಲ್ಲೇ ಇರಿ ಎಂದು ಸರ್ಕಾರ ಹೇಳುವವರೆಗೂ ನೀವು ಮನೆಯಲ್ಲೇ ಇರಿ. ಇದು ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ಜೀವ ಉಳಿಸುತ್ತದೆ. ಖಿಲಾಡಿ ಆಗುತ್ತೀರೋ ಮೂರ್ಖ ಆಗುತ್ತೀರೋ ನೀವೇ ತೀರ್ಮಾನಿಸಿ’ ಎಂದು ಅಕ್ಷಯ್ ದೀರ್ಘ ಮಾತುಗಳಲ್ಲಿ ಹೇಳಿದ್ದಾರೆ.
ಅಕ್ಷಯ್ ಅವರಂತೆಯೇ ಹೃತಿಕ್ ರೋಷನ್ ಕೂಡ ತಮ್ಮ ಟ್ವಿಟರ್ ಖಾತೆಯ ಮೂಲಕ ಒಂದು ವಿಡಿಯೊ ಹಂಚಿಕೊಂಡಿದ್ದಾರೆ. ‘ನಾವು ಈಗ ನಮ್ಮ ದೃಷ್ಟಿಯನ್ನು ಈ ರೋಗ ಹಾಗೂ ಈಗಿನ ಸಂದರ್ಭದಿಂದ ಬೇರೆಡೆ ಹಾಯಿಸುವಂತೆ ಇಲ್ಲ. ನಾವು ಇದನ್ನು ಎದುರಿಸಬೇಕು. ಮತ್ತೆ ಮತ್ತೆ ಕೈತೊಳೆಯುತ್ತಿರುವುದು ಸೇರಿದಂತೆ ಕೆಲವು ಕ್ರಮಗಳನ್ನು ಕೈಗೊಂಡು ನಾವು ಈ ರೋಗ ಹರಡುವುದನ್ನು ನಿಲ್ಲಿಸಬಹುದು’ ಎಂದು ಹೃತಿಕ್ ಹೇಳಿದ್ದಾರೆ.
‘ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಬೇಕು. ಪರಿಸ್ಥಿತಿ ನಮ್ಮ ನಿಯಂತ್ರಣ ಮೀರಿ ಹೋದರೆ, ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಹಾಗಾಗಿ, ನಾವೆಲ್ಲ ಹೆಚ್ಚು ಜವಾಬ್ದಾರಿಯುತರಾಗಿ ಇರೋಣ. ನಾವೆಲ್ಲ ಸೇರಿ ಇದರ ವಿರುದ್ಧ ಹೋರಾಡೋಣ, ನಾವೆಲ್ಲ ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳೋಣ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.